Monday, October 09, 2006

ಹೀಗೊಂದು ಭಾನುವಾರ


೦೧/೦೮/೦೪.

ಬೆಳಗ್ಗೆ ೭.೦೦ ಘಂಟೆಗೆ, ಡೀನ್, ಮಯೂರ್, ಬಾಲ್‍ರಾಜ್ ಶಾಂತಲಾ ಸಿಲ್ಕ್ ಹೌಸ್ ಹತ್ತಿರ ಭೇಟಿಯಾಗಿ, ಶಿವೂಗೆ ಕಾಯುತ್ತಾ, ೭.೨೦ಕ್ಕೆ ಬಂದ ಲೇಟ್ ಲತೀಫ್ ಜೊತೆ ಹೊರಟು, ಮೈಸೂರ್ ರಸ್ತೆಯಲ್ಲಿ ಕಾಯುತ್ತಿದ್ದ ನನ್ನನ್ನೂ ಕಾರಲ್ಲಿ ತುಂಬಿಕೊಂಡು - ರಾಮನಗರದ ಕಡೆ ಧಾವಿಸಿದೆವು.

ಕಾಮತ್ ಲೋಕರುಚಿಯಲ್ಲಿ ರುಚಿಯಾದ ಕೊಟ್ಟೆ ಇಡ್ಲಿ, ಮಸಾಲೆದೋಸೆ, ಖಾಲಿ ದೋಸೆ - ಖಾಲಿ ಮಾಡಿ, ಕಾಫಿ ಕುಡಿದು, ಮತ್ತೆ ರಾಮನಗರದತ್ತ ಅರ್ಧ ಕಿಲೋಮೀಟರ್ ಬಂದು ಕನಕಪುರ ಕಡೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿದೆವು. ಮೊದಲು ಕೆ.ಪಿ.ದೊಡ್ಡಿ, ನಂತರ ಕೈಲಾಂಚ. ಅಲ್ಲಿಂದ ಹೊಳೆ ದಾಟಿ ಹೋಗುವ ಮಾರ್ಗದಲ್ಲಿ ಕಾರು ಹೋಗುವುದು ಕಷ್ಟ ಎಂದು ಸುಮಾರು ೩ ಕಿ.ಮೀ. ಸುತ್ತು ಹಾಕಿ ಬೆಟ್ಟದ ತಳದಲ್ಲಿರುವ ಊರು ತಲುಪಿದೆವು. ಬೆಟ್ಟಕ್ಕೆ ಮಾರ್ಗವಿದೆ, ಆದರೆ ಭೂ ಕುಸಿತದಿಂದ ಬಂಡೆಗಳು ಬಿದ್ದು ಅಡಚಣೆ ಉಂಟಾಗಿದೆ. ಸ್ವಲ್ಪ ದೂರ ಕಾರ್ ಕೊಂಡೊಯ್ದ ಮಯೂರ್ ಒಂದು ಕಡೆ ನಿಲ್ಲಿಸಿ ನಂತರ ಎಲ್ಲರೂ ಜೊತೆಗೆ ಬೆಟ್ಟ ಏರಿಲಾರಂಭಿಸಿದೆವು. ನಂದಿಯ ಒಂದು ಬೃಹತ್ ವಿಗ್ರಹದ ಪಕ್ಕ ನಿಂತುಕೊಂಡು ಫೋಟೋ ಹೊಡೆದು, ಪ್ರಕೃತಿ ಸೌಂದರ್ಯ ನೋಡುತ್ತಾ ಕುಳಿತು ಪುನಹ ಏರಲಾರಂಭಿಸಿದೆವು. ನಿಜಕ್ಕೂ ಚಮತ್ಕಾರವೆನಿಸುವಂತೆ ಬಂಡೆಗಳ ನಡುವೆ ಗುಹೆಯಂಥಾ ಜಾಗದಲ್ಲಿ ನುಸುಳಿ ಕತ್ತಲಲ್ಲಿ ತಡಕಾಡುತ್ತಾ, ಮುಂದೆ ಕಾಣುವ ಸೂರ್ಯನ ಕಿರಣಗಳನ್ನು ನೋಡಿ ದಾರಿಯ ಗುರುತು ಹಿಡಿದು (ಬಹಳ ಕಷ್ಟವೇನಿಲ್ಲ) ಹೊರ ಬಂದು, ಪುನಹ ಕಡಿದಾದ ಜಾಗದಲ್ಲಿ ಹೌದೋ ಅಲ್ಲವೋ ಎಂಬಂತಿರುವ ಮೆಟ್ಟಲೇರಿ, ಆಂಜನೇಯನ ಗುಡಿ ಬಳಸಿ ಮತ್ತೂ ಮೇಲೇರಿದೆವು. ಮೇಲ್ಗಡೆ ಒಂದು ಮಂಟಪ ಮತ್ತು ದೇವರಿಲ್ಲದ ಗುಡಿ (ಇನ್ನೂ ಅಭಿವೃದ್ಧಿಯಲ್ಲಿದೆ). ಅಲ್ಲೊಂದು ಪುಟ್ಟ ಕೆರೆ ಇದೆ, ಗಾಳಿಗೆ ಪಾಚಿಯೆಲ್ಲಾ ಒಂದೇ ಕಡೆ ಸೇರಿ ನೋಡಲು ಬಹಳ ಸುಂದರವಾಗಿತ್ತು.

ಬಾಲ್‍ರಾಜ್ ಬೆಳಗಿನಿಂದ ಬೆದರಿಸುತ್ತಿದ್ದ ಕ್ಷಣ ಬಂದೇ ಬಿಟ್ಟಿತು. ರಾಪ್ಲಿಂಗ್ ಮಾಡುವುದು ಮೊದಲಲ್ಲದಿದ್ದರೂ, `ಸ್ಟಾಮಕ್ ರಾಪ್ಲಿಂಗ್' ಮೊದಲನೆ ಅನುಭವ. ಮಾಮೂಲು ರಾಪ್ಲಿಂಗ್‍ನಲ್ಲಿ ಭೂಮಿಗೆ ಬೆನ್ನು ಮಾಡಿಕೊಂಡು ಬಂಡೆ ಇಳಿದರೆ, ಸ್ಟಾಮಕ್ ರಾಪ್ಲಿಂಗ್‍ನಲ್ಲಿ ಭೂಮಿಗೆ ಮುಖ ಮಾಡಿ, ಅಂದರೆ, ಹೊಟ್ಟೆಗೆ ಹಗ್ಗ ಕಟ್ಟಿಕೊಂಡು, ನೆಲದ ಮೇಲೆ ನಡೆಯುವಂತೆ ಬಂಡೆ ಇಳಿಯಬೇಕು. ನನ್ನಿಂದ ಸಾಧ್ಯವೇ ಎನಿಸುತ್ತಿದ್ದುದು ಮಾಡುತ್ತಿರುವಾಗ ಇಷ್ಟೇನಾ ಎನ್ನಿಸಿತು. ಎಲ್ಲರೂ ರಾಪ್ಲಿಂಗ್ ಮಾಡಿದ ನಂತರ ಅಲ್ಲಿಂದ ಹೊರಟು ಇಳಿದು ಕಾರಿಗೆ ಬಂದು, ಹಳ್ಳಿಯಲ್ಲಿ ರೇಷ್ಮೆ ಗೂಡು ನೋಡಿ, ಪುನಹ ಕಾಮತ್ ಲೋಕರುಚಿಗೆ ಬಂದೆವು. ಅಲ್ಲಿ ಜೋಳದ ರೊಟ್ಟಿ, ಎಣ್ಣೆಗಾಯಿ ತಿಂದಿದ್ದೇ ತಿಂದಿದ್ದು. ಅನ್ನ ಸಾಂಬಾರ್ ಉಂಡಿದ್ದೇ ಉಂಡಿದ್ದು !!

ಗಣೇಶಾ ನಿನ್ನ ಮಹಿಮೆ ಅಪಾರ, ನಿನ್ನ ಮೂರ್ತಿಗಳದು ವಿಚಿತ್ರ ವ್ಯಾಪಾರ. ಒಬ್ಬ ಇಪ್ಪತ್ತೈದು ಹೇಳಿದರೆ ಇನ್ನೊಬ್ಬ ಹದಿನೈದು ಹೇಳಿ ಹತ್ತಕ್ಕೆ ಕೊಡುವ ವ್ಯವಹಾರ!! ಜಾನಪದ ಲೋಕ, ಲೋಕರುಚಿ ದ್ವಾರದಲ್ಲಿ ಮಾರುತ್ತಿದ್ದ ಮಣ್ಣಿನ ದೊಡ್ಡ / ಪುಟ್ಟ ಮೂರ್ತಿಗಳು (ಸಂಗೀತ ಕಛೇರಿ ಮಾಡುವ ಗಣೇಶ, ಡ್ಯಾನ್ಸ್ ಮಾಡುವ ಗಣೇಶ, ಇಲಿ ಮೇಲೇರಿ ಟ್ರೆಕ್ಕಿಂಗ್ ಹೊರಟಿರುವ ಗಣೇಶ ಮುಂತಾದುವು) ತುಂಬಾ ಮುದ್ದೆನಿಸಿದುವು. ಅಂತೆಯೇ ಬೇಕಾದುದನ್ನು ಖರೀದಿಸಿ, ಹೊರಟು ರಾಮಗಿರಿ ಬೆಟ್ಟದ ತಪ್ಪಲಿಗೆ ಬಂದೆವು.

ಅಹಹಾ! ಮಕ್ಕಳಂತೆ ಬಂಡೆ ಮೇಲೆ ಜುರ್‍ರ್‍ ಎಂದು ಜಾರುತ್ತಾ ಜಾರುಬಂಡೆ ಆಟ ಆಡಿದೆವು.

ಬಾಲ್‍ರಾಜ್ ನಮ್ಮನ್ನು ಒಂದು ರೀತಿ `ಮಡಿ' ಮಾಡಲೇ ಬೇಕು ಎಂದು ನಿರ್ಧರಿಸಿದ ಕಾರಣ ಯಾರೂ `ಟ್ರಸ್ಟ್ ಫಾಲ್' ನ ಅನುಭವದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. `ನಾಲ್ಕು ಜನ, ಇಬ್ಬರಾದ ಮೇಲೆ ಇಬ್ಬರಂತೆ, ಕೈ ಕೈ ಗಟ್ಟಿಯಾಗಿ ಹಿಡಿದುಕೊಂಡು ನಿಂತರೆ, ಆ ಎತ್ತರದಿಂದ ಸ್ವಲ್ಪ ಮೇಲೆ ಇನ್ನೊಬ್ಬ ನೇರವಾಗಿ ನಿಂತುಕೊಂಡು ಕಾಲುಗಳನ್ನು ಮಡಚದೆ, ಹಿಂದಕ್ಕೆ ಬೀಳಬೇಕು, ಇದು `ಫಾಲ್'. ಕೆಳಗೆ ನಿಂತಿರುವ ನಾಲ್ವರು ಆತನನ್ನು ಕೈಗಳ ಉಯ್ಯಲೆಯಲ್ಲಿ ಹಿಡಿದು ನೆಲಕ್ಕೆ ಬೀಳದಂತೆ ನೋಡಿಕೊಳ್ಳುತ್ತಾರೆ. ಇದೇ `ಟ್ರಸ್ಟ್'. ನಮ್ಮ ಜೊತೆಗಿರುವವರ ಮೇಲಿರುವ ನಂಬಿಕೆಯೇ ನಮಗೆ ಹಿಂದೆ ಬೀಳಲು ಕೊಡುವ ಧೈರ್ಯ'. (ಒಮ್ಮೆ ಸ್ವಲ್ಪ ಎತ್ತರದಲ್ಲಿ ನಿಂತುಕೊಂಡು, ನೆಲದಲ್ಲಿ ಹಾಸಿಗೆ ಹಾಸಿ, ನೇರವಾಗಿ ನಿಂತು ಹಿಂದೆ ಬೀಳಲು ಪ್ರಯತ್ನಿಸಿ, ಅಷ್ಟು ಸುಲಭವಿಲ್ಲ; ನಮ್ಮ ಅರಿವು ಅಷ್ಟು ಸುಲಭವಾಗಿ ನಮ್ಮನ್ನು ಬೀಳಲು ಬಿಡುವುದಿಲ್ಲ...)

ಸುಮಾರು ೨೫೦ - ೩೦೦ ಮೆಟ್ಟಿಲುಗಳನ್ನೇರಿ ಪಟ್ಟಾಭಿರಾಮ ದೇವರ ದೇವಸ್ಥಾನಕ್ಕೆ ಬಂದೆವು. ಪಕ್ಕದಲ್ಲಿ ಒಂದು ಸುಂದರವಾದ ಕೊಳ ಇದೆ. ಅದು ಒಂದು ನದಿಯ ಉಗಮ ಸ್ಥಾನ ಎಂದೂ ಹೇಳುತ್ತಾರೆ.

ಓ! ಬಾಲ್‍ರಾಜ್ ನಮ್ಮನ್ನು ಬಿಡುವಂತೆ ಕಾಣುತ್ತಿಲ್ಲ. ಮರಕ್ಕೆ ಹಗ್ಗ ಸುತ್ತಿ ಒಂದು ತುದಿಯನ್ನು ತನ್ನ ಕೈಲಿ ಹಿಡಿದು ಇನ್ನೊಂದು ತುದಿಯನ್ನು ನಮ್ಮ ಸೊಂಟಕ್ಕೆ ಕಟ್ಟಿ ಸುಮಾರು ೮ / ೧೦ ಅಡಿ ಮೇಲೇರಿಸಿ, ಕೆಳ ಹಾರು ಎಂದರು. ಜೊತೆಗೆ ಹಗ್ಗವನ್ನು ಕೈಯಲ್ಲಿ ಹಿಡಿಯಬಾರದೆನ್ನುವ ಬೆದರಿಕೆ ಬೇರೆ! ಮೇಲಿಂದ ಕೆಳ ಹಾರಿದಾಗ ಅದು ಹೇಗೋ ಕೈಗಳು ಹಗ್ಗವನ್ನು ಹಿಡಿದರೂ, ಆಗುವ ಅನುಭವ ನಿಜಕ್ಕೂ ಅದ್ಭುತ! ರೋಮಾಂಚಕ!

ಸರಿ, ಕತ್ತಲಾಯಿತು ಇನ್ನೇನು, ಪುನಹ ಮೆಟ್ಟಿಲುಗಳನ್ನಿಳಿದು ಕಾರು ನಿಲ್ಲಿಸಿದ್ದಕ್ಕೆ `ಪಾರ್ಕಿಂಗ್ ಫೀಸ್' ಕೊಟ್ಟು ಮತ್ತೆ ಬೆಂಗಳೂರಿಗೆ ಹೊರಟೆವು......

Saturday, October 07, 2006

ಏನಿದೇನಿದೇನು

ಏನಿದೇನಿದೇನು! ಚಿತ್ತಾರ ಭೂಮಿ ಬಾನು!

೧೬.೦೭.೦೪ - ೧೯/೦೭/೦೪.
ಚಿಕ್ಕಮಗಳೂರು ಬಸ್ ಸ್ಟಾಂಡ್‍ನಲ್ಲಿ ಇಳಿದು ಅಲ್ಲೇ ಎಲ್ಲರೂ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡು, ನಂತರ ೬.೦೦ ಘಂಟೆಗೆ ದಾವಣಗೆರೆಗೆ ಹೋಗುವ ಪ್ರೈವೇಟ್ ಬಸ್ ಹತ್ತಿ ಕೈಮರ ಎಂಬಲ್ಲಿ ಇಳಿದೆವು. ನಂತರ ಸ್ವಲ್ಪ ಮುಂದೆ ಹೋಗಿ, ನಿರ್ವಾಣೇಶ್ವರ ಮಠಕ್ಕೆ ಹೋಗಿ, ಅಲ್ಲಿಯ ಸೌಕರ್ಯಗಳೊಂದಿಗೆ ನಿತ್ಯಕರ್ಮಗಳನ್ನು ಮುಗಿಸಿ, ತಿಂಡಿ ತಯಾರು (ಅವಲಕ್ಕಿ) ಮಾಡಿ, ತಿಂದು, ದೇವಸ್ಥಾನದೊಳ ಹೋಗಿ ಕೈ ಮುಗಿದು ಅಲ್ಲಿಂದ ೯.೦೦ ಘಂಟೆಗೆ ಹೊರಟೆವು. ಪುನಹ, ಕೈಮರ ನಿಲ್ದಾಣಕ್ಕೆ ಬಂದು ಕಾದು, ಬಸ್ ಬರುವುದು ಇನ್ನೂ ನಿಧಾನ ಎಂದು ನಡೆಯಲಾರಂಭಿಸಿ, ಸಾಮಾನ್ಯ ೨ ಕಿ.ಮೀ ನಡೆದು, ದಾರಿಯಲ್ಲಿ ಒಂದು ಲಾರಿಯವನಲ್ಲಿ ರಿಕ್ವೆಸ್ಟ್ ಮಾಡಿ, `ಸರ್ಪದಾರಿ' ಗೆ ಬಂದೆವು. ನಂತರ ನಿಜವಾದ ಚಾರಣ (ಬೆಟ್ಟಕ್ಕೆ) ಸುರು. ಕೆಲವರು ನಿಧಾನಕೆ (ನನ್ನನ್ನೂ ಸೇರಿ) ಕೆಲವರು ವೇಗವಾಗಿ ಹತ್ತಲಾರಂಭಿಸಿ, ಸುಮಾರು ೨ ರಿಂದ ೨.೩೦ ಘಂಟೆ ಸಮಯ ತೆಗೆದುಕೊಂಡು, ನಡುವೆ ಪ್ರಕೃತಿ ಸೌಂದರ್ಯ, ವೈಚಿತ್ರ್ಯ ಸವಿಯುತ್ತಾ, ದಾರಿಯಲ್ಲಿ ನನ್ನ ಬ್ಯಾಗ್ ಬೆಲ್ಟ್ ತುಂಡಾಗಿ, ಹೊಲಿದು, ಮುಳ್ಳಯ್ಯನ ಗಿರಿ ತಲುಪಿದೆವು. ಮಳೆ ಇಲ್ಲದಿದ್ದರೂ ವಾತಾವರಣ ತಂಪಾಗಿ, ಬಿಸಿಲು ಇರಲಿಲ್ಲವಾದುದರಿಂದ ನೀರಿನ ಆವಶ್ಯಕತೆ ಅಷ್ಟಾಗಿ ಬರಲಿಲ್ಲ.

ಬೆಟ್ಟಕ್ಕೆ ಹತ್ತುವಾಗ ದಾರಿಯಲ್ಲಿ ಒಂದು ಗುಹೆಯು `ಕಲಾಕೃತಿಯಲ್ಲಿ ನನ್ನ ಸಮಾನ ಯಾರೂ ಇಲ್ಲ, ನನ್ನನ್ನು ವೀಕ್ಷಿಸಿ' ಹೋಗಿ ಎಂದಿತು, ನಿಜಕ್ಕೂ ಪ್ರಕೃತಿಯ ಕುಂಚ ಅಲ್ಲಿ ಹೇಗೆ ಓಡಾಡಿ ಚಿತ್ತಾರ ಬಿಡಿಸಿದೆ ಎಂದರೆ ಕಣ್ಣಾರೆ ಕಂಡ ಹೊರತು ನಂಬಲಸಾಧ್ಯ ಮತ್ತು ವಿವರಿಸಲಸಾಧ್ಯ.

ಮೇಲ್ಗಡೆ ತಲುಪಿದಾಗ ಕೆಳಗೆಲ್ಲಾ ಮಂಜು ಮುಸುಕಿ ನಾವು ಬಂದಿದ್ದ ಹಾದಿಯೂ ಕಾಣುತ್ತಿರಲಿಲ್ಲ. ಮೇಲೆ ಮಣ್ಣಿನ ಒಂದು ಪುಟ್ಟ ಗುಡ್ಡ, ಗೋಪುರದಂತೆ ಇದೆ. ಒಂದು ಶಿವನ ದೇವಸ್ಥಾನ ಇದ್ದು, ಅಲ್ಲೇ ಪಕ್ಕದ ಕಟ್ಟಡದಲ್ಲಿ ವಾಸ ಇರುವವರು ಪೂಜೆ ಮಾಡುತ್ತಾರೆ. ಬೇಕಾದರೆ ಊಟದ ವ್ಯವಸ್ಠೆಯನ್ನೂ ಬೇಕಾದರೆ ಮಾಡುತ್ತೇವೆ ಎಂದು ಅವರು ಹೇಳಿದರು. ನಾವು ಕೊಂಡೊಯ್ದ ಕಾಯಿ ಹೋಳಿಗೆ, ಕೋಡುಬಳೆ, ಬಾಳೆಹಣ್ಣು, ಮಿಕ್ಸ್ಚರ್, ಬ್ರೆಡ್, ಬಿಸ್ಕಿಟ್ ಮುಂತಾದವು ಹೆಸರಿಲ್ಲದಂತೆ ಖಾಲಿಯಾದುವು. ಕರ್ನಾಟಕದ ಅತಿ ಎತ್ತರದ ಬೆಟ್ಟದ ಮೇಲಿದ್ದರೂ ಹಸಿವೆಂಬುದು ಇಂಗಿರಲಿಲ್ಲ.

ಅದ್ಭುತವಾದ ನೋಟ ಅದು. ಮುಳ್ಳಯ್ಯನ ಗಿರಿಯಿಂದ ಬಾಬಾಬುಡನ್‍ಗಿರಿ ಕೂಡಿದಂತೆ ಸುತ್ತಲೂ ಬೆಟ್ಟಗಳೂ, ಮೋಡ, ಮಂಜು ಮುಸುಕಿದ ಪರ್ವತಗಳು, ಆ ಎತ್ತರಕ್ಕೇರಿದುದನ್ನು ಸಾರ್ಥಕ ಎನ್ನುತ್ತಿದ್ದುವು.

ಅಲ್ಲೇ ಸ್ವಲ್ಪ ಹೊತ್ತು ಇದ್ದು ನಂತರ ಮನಸ್ಸಿಲ್ಲದ ಮನಸ್ಸಿನಿಂದ ಸೀತಾಳಯ್ಯನ ಗಿರಿಯತ್ತ ಇಳಿಯಲಾರಂಭಿಸಿದೆವು. ಸುಮಾರು ಇನ್ನೂರು - ಮುನ್ನೂರು ಮೆಟ್ಟಿಲಿಳಿದ (ಲೆಕ್ಕ ಮಾಡಿಲ್ಲ) ನಂತರ ನಾಗರಿಕ ಪ್ರಪಂಚವನ್ನು ಜ್ನಾಪಿಸುವಂತೆ ಕಡಿದ ಮಾರ್ಗ ಸಿಕ್ಕಿತು. ಮುಂದೆ ಸ್ವಲ್ಪ ದೂರ ಹೋಗಿ ಕಾಲುದಾರಿ ಇಳಿದು ಪುನಹ ಇನ್ನೊಂದು ಗುಡ್ಡ ಹತ್ತಿ ಇಳಿದು ಸೀತಾಳೇಶ್ವರ ಮಠ ತಲುಪಿದೆವು, ಮಾರ್ಗದಲ್ಲೇ ಹೋಗಿದ್ದರೂ ಈ ಜಾಗಕ್ಕೇ ತಲುಪುತ್ತಿದ್ದೆವು ಆದರೆ ಕಾಲುದಾರಿ ಕೊಡುವ ಮಜಾ ಮಾರ್ಗದಲ್ಲೆಲ್ಲಿ?

ಸುಸ್ತಾದವರು ಕಾಲು ಚಾಚಿ ಮಲಗಿದರೆ ಕುತೂಹಲಿಗಳು ಸುತ್ತ ಮುತ್ತ ಏನೇನಿದೆ ಎಂದು ನೋಡಲು ಹೊರಟೆವು. ಇಲ್ಲೂ ಒಂದು ಪುಟ್ಟ ಗುಹೆ ಇದೆ. ವೇಣು, ಡೀನ್, ಮೋಹನ್ (ಮಂಜು) ಮತ್ತು ನಾನು ಹಾಗೇ ಹೋಗುತ್ತಾ, ಪ್ರಕೃತಿಯ ವೈಶಿಷ್ಟ್ಯ ಮತ್ತು ಸೂರ್ಯ ಕಿರಣಗಳ ಆಟವನ್ನು ನೋಡುತ್ತಾ ಹತ್ತಿರದಲ್ಲೇಲ್ಲೋ ನೀರು ಬೀಳುವ ಶಬ್ದಕ್ಕೆ ಮರುಳಾಗಿ ಅದರ ಶೋಧಕ್ಕೆ ಹೊರಟೆವು. ಜಲಪಾತ ಕಾಣದೇ, ಜಿಗಣೆಗಳೊಂದಿಗೆ, ಪುನಹ ಮುಳ್ಳಯ್ಯನ ಗಿರಿ ಕಡೆ ಹೋಗುವ ಮಾರ್ಗವಾಗಿ ಮಠಕ್ಕೆ ಹಿಂದಿರುಗಿದೆವು. ಕಾಫಿ ಕುಡಿದು ಪುನಹ ಡೀನ್, ಮೋಹನ್, ನಾನು ಅಲ್ಲೇ ಸ್ವಲ್ಪ ದೂರದಲ್ಲಿ ಹುಲ್ಲು ಹಾಸಿನ ಮೇಲೆ ಕುಳಿತೆವು. ಘಂಟೆ ೭.೩೦ ಆಗಿದ್ದರೂ ಇನ್ನೂ ಕತ್ತಲಾಗದಿರುವುದನ್ನು ಕಂಡ ಮೋಹನ್‍ಗೆ ಆಶ್ಚರ್ಯ. ಅಂತೆಯೇ ಮುಸುಗಿದ ಮಂಜಿನ ನಡುವೆ ಕುಳಿತ ಅನುಭವವನ್ನು ಸವಿಯುವ ಆತುರ. ಸ್ವಲ್ಪ ಹೊತ್ತಿನ ನಂತರ ಅಂದರೆ ಸುಮಾರು ೮.೦೦ - ೮.೩೦ ಘಂಟೆಗೆ ಮಠದ ದೀಪಗಳೂ ಕಾಣದಂತೆ ಮುಸುಗಿದ ಮಂಜು ನೋಡಿ ನಮ್ಮ ಮಂಜುಗೆ ವಿಸ್ಮಯ. ಎಲ್ಲೋ ದೂರದಿಂದೆಂಬಂತೆ ಸಿಳ್ಳೆ ಮತ್ತು ತಟ್ಟೆಯ ಶಬ್ದಗಳಿಂದ ನಮಗೆ ಊಟದ ಕರೆ ಬಂತು. ಊಟದಲ್ಲಿ, ಸತ್ಯನಾರಾಯಣ ಮಾಡಿದ ಪಾಯಸ, ಶಾಂತಪ್ಪ ಹಾಗೂ ಪತ್ನಿ (ಮಠದಲ್ಲಿರುವವರು) ಮಾಡಿದ ಅನ್ನ ಮತ್ತು ಹುಳಿ ಅತಿಯಾಗಿ ತಿಂದ ನನಗೆ ಉಸಿರಾಡಲೂ ಕಷ್ಟವೆನಿಸಿತು. ನಂತರ ಎಲ್ಲರೂ ಶವಾಸನದಿಂದ ನಿದ್ರಾಸನಕ್ಕೆ ತಲುಪಿದೆವು.

ಮರು ಬೆಳಗ್ಗೆ ೫.೩೦ಕ್ಕೆ ಡೀನ್, ವೇಣು ಹಾಗೂ ನಾನು ಪುನಹ ನಮ್ಮದೇ ದಾರಿಯಲ್ಲಿ ಹೊರಟೆವು. ಆ ಅದ್ಭುತವಾದ ಜಾಗದಲ್ಲಿ ಬೆಳಗಿನ ಹೊತ್ತು ಹಕ್ಕಿಗಳ ಚಿಲಿಪಿಲಿ ಕೇಳುತ್ತಾ, ಕುಳಿತೆವು. ನಂತರ ಮೋಹನ್ ನಮ್ಮ ಜೊತೆಗೂಡಿದರು. ವೇಣು ಹೋಗಿ ಉಳಿದವರೆಲ್ಲರನ್ನೂ ಕರೆತಂದರು. ಅವರ್ಯಾರಿಗೂ ಕಾಲಿಗೆ ಚಪ್ಪಲಿ ಹಾಕಲು ವೇಣು ಬಿಟ್ಟಿರಲಿಲ್ಲ ಅದಕ್ಕಾಗಿ ನಮ್ಮ ಜೊತೆ ಪುನಹ ಸೀತಾಳಯ್ಯನ ಗಿರಿ ಹತ್ತಿ ಇಳಿಯಲು ಒಪ್ಪದೆ ಅವರೆಲ್ಲಾ ತಿರುಗಿ ಮಠಕ್ಕೆ ಹೋದ ನಂತರ ನಾವು ಮತ್ತೆ ಮುಳ್ಳಯ್ಯನ ಗಿರಿ ಕಡೆ ಹೋಗಿ ಬೆಳಗಿನ ಮೋಡ, ಮಂಜು ಕೆಳಗೆಲ್ಲಾ ಕವಿದು ಸುತ್ತಲೂ ಸಮುದ್ರದಂತಾಗಿರುವ ಜಾಗಗಳನ್ನೆಲ್ಲಾ ನೋಡುತ್ತಾ ಬಂದೆವು. ದಾರಿಯಲ್ಲಿ ಇದ್ದ ಗಿಡಗಳ ಮೇಲೆ ಕುಳಿತ ಮಂಜಿನ ಹನಿಯ ಸ್ನಾನವನ್ನು ಮಾಡುತ್ತಾ ಪುಟ್ಟ ಮಕ್ಕಳಂತೆ ನಲಿದು `ನನ್ನ ಗಿಡ ನನ್ನ ಗಿಡ' ಎಂದು ಹಕ್ಕು ಸ್ಥಾಪಿಸಿ, ಸೆಲ್ವಕುಮಾರ್ ಪ್ರಕಾರ `ನಿಜಕ್ಕೂ ಮರೆಯಲಾಗದ ಅನುಭವ'ವನ್ನು ಪಡೆದೆವು.

ಉಪ್ಪಿಟ್ಟು, ಚಿತ್ರಾನ್ನವನ್ನು ದೇವಳದ ಪ್ರಾಂಗಣದಲ್ಲಿ ತಿಂದು, ಮನೆಯವರಿಗೆ ಧನ್ಯವಾದಗಳನ್ನರ್ಪಿಸಿ ಬ್ಯಾಗ್‍ಗಳನ್ನು ಶಾಂತಪ್ಪ ಅವರ ಜೀಪಲ್ಲಿ ಹಾಕಿ ಶೇಖರ್ ಮತ್ತು ಕೃಷ್ಣಮೂರ್ತಿ ಜೊತೆ ಮಾಡಿ ಕಳುಹಿಸಿ, ನಾವು ಕಾಲುದಾರಿಯಲ್ಲಿ ಇಳಿದೆವು. ಪುನಹ ಬಾಬಾಬುಡನ್‍ಗಿರಿಗೆ ಹೋಗುವ ದಾರಿ - ಅಂದರೆ ನಾವು ಚಾರಣ ಸುರು ಮಾಡಿದ ಮಾರ್ಗಕ್ಕೆ ಬಂದು ಅಲ್ಲೂ ಒಂದು ಜಲಪಾತ ನೋಡಿದೆವು. ಬಸ್ ಬಂತು. ಕೆಲವು ಸೀಟ್ ಸಿಕ್ಕಿ ಕುಳಿತರೂ ಬಸ್‍ನ ಟಾಪ್ ಮೇಲೆ ಕೂರುವ ಆಸೆ ಹೆಚ್ಚಾಗಿ ಮೇಲೇರಿದೆವು. ನಿರ್ವಾಹಕನೂ ಉತ್ಸಾಹದಿಂದ ನಮ್ಮ ಜೊತೆ ಬಂದು ಕುಳಿತರು. ಬಾಬಾ ಬುಡನ್‍ಗಿರಿ ತಲುಪಿ, ಗಾಳಿಕೆರೆಯತ್ತ ಮಾರ್ಗದಲ್ಲಿ ನಡೆಯುತ್ತಾ ಸಾಗಿ ಅಲ್ಲಿ ಬುತ್ತಿ ತಿಂದೆವು. ವಾಪಾಸ್ ಬಾ.ಬಾ.ಬು ಗೆ ಬಂದು ಖಾಲಿ ಇದ್ದ ಬಸ್ ಹತ್ತಿ ಸೀಟಲ್ಲಿ ಕುಳಿತಾಗ ಮತ್ತೆ ಮೇಲೆ ಕೂರುವ ಇಚ್ಛೆ ಬಲವಾಗತೊಡಗಿತು. ಬೇರೆ ಬಸ್ಸಾದ್ದರಿಂದ ಬಾಯ್ಮುಚ್ಚಿ ಕೂತರೂ ತಡೆಯದೇ ಕೊನೆಗೆ ನಿರ್ವಾಹಕನನ್ನು ಕೇಳಿದಾಗ ಧಾರಾಳವಾಗಿ ಮೇಲೇರಿ ಎಂಬ ಪರವಾನಗಿ ಸಿಕ್ಕಿದ್ದೇ, ಕೋತಿಗಳಂತೆ ಮೇಲೇರಿದೆವು. ಇನ್ನೂ ಮೂರು ಜನ (ಬೆಂಗಳೂರಿನವರೆ) ನಮ್ಮ ಜೊತೆ ಮೇಲೇರಿದರು.

ಚಿಕ್ಕಮಗಳೂರು ತಲುಪಿದಾಗ ಅಯ್ಯೋ ಅನಿಸಿತು. ಪೆಟ್ರೋಲ್ ಬಂಕ್ ಬಳಿ ಮೇಲಿಂದ ಕೆಳಗಿಳಿದು ಮತ್ತೆ ಬಸ್ಸೊಳಗೆ ಬಂದಾಗ ಹವಾನಿಯಂತ್ರಣ ಕೋಣೆಯಿಂದ ಹೊರ ಬಂದಂಥಾ ಚಡಪಡಿಕೆ.

ಚಿಕ್ಕಮಗಳೂರಿನಲ್ಲಿ ಎಲ್ಲಿ ಒಬ್ಬರನ್ನೊಬ್ಬರು ಪರಿಚಯಿಸಿಕೊಂಡೆವೋ ಅಲ್ಲೇ ಕುಳಿತು ಮತ್ತೆ ಒಂದು ಸಭೆ ನಡೆಸಿ, ಊರು ಸುತ್ತಲು ಹೋದೆವು. ಅನುರಾಧ ಕಾಫಿ ಪುಡಿ, ಶೋಭ ಕೃಷ್ಣಮೂರ್ತಿ ಮಗಳಿಗೆ ಆಟಿಕೆ, ಹೀಗೆ ಖರೀದಿ ಮುಗಿಸಿ ಅಲ್ಲಿಂದ ಕಾಮತ್ ಹೋಟೇಲ್ ತಲುಪಿ ರಾತ್ರಿಯ ಊಟ ಮಾಡಿದೆವು. ತಿರುಗಿ ಬಸ್‍ಸ್ಟಾಂಡ್‍ಗೆ ಬಂದು ಹೋಟೇಲ್‍ನಲ್ಲಿಟ್ಟಿದ್ದ ಬ್ಯಾಗ್‍ಗಳನ್ನು ತೆಗೆದುಕೊಂಡು ಬಸ್ ಹತ್ತಿದೆವು. ಬಸ್ಸ್‍ನಲ್ಲಿ ಕಿರಿಚಾಡುತ್ತಾ, ನಗುತ್ತಾ, ನಿರ್ವಾಹಕನ ಬಳಿ ಬೈಸಿಕೊಂಡು, ಜಾಣಮಕ್ಕಳಂತೆ ನಿದ್ದೆ ಮಾಡಿ, ಬೆಳಗ್ಗೆ ಬೆಂಗಳೂರು ತಲುಪಿ, ಸುಂದರವಾದ ಕನಸು ಕಳೆಯಿತೆಂಬಂತೆ ಎದ್ದೆವು.