ಎಳ್ಳು-ಬೆಲ್ಲ ಎಲ್ಲೆಡೆಯಲ್ಲಿ
ಒಳ್ಳೆಯ ಮಾತು ಬಾಯಿಯಲ್ಲಿ
ಸುಖ ಶಾಂತಿ ಜೀವನದಲ್ಲಿ.
ಸಂಕ್ರಾಂತಿಯ ಶುಭಾಶಯ.
- ಫೂ.
14-01-2025
ಎಳ್ಳು-ಬೆಲ್ಲ ಎಲ್ಲೆಡೆಯಲ್ಲಿ
ಒಳ್ಳೆಯ ಮಾತು ಬಾಯಿಯಲ್ಲಿ
ಸುಖ ಶಾಂತಿ ಜೀವನದಲ್ಲಿ.
ಸಂಕ್ರಾಂತಿಯ ಶುಭಾಶಯ.
- ಫೂ.
14-01-2025
ಇಪ್ಪತ್ತನಾಲ್ಕರ ಹರೆಯ ಕಳೆದು
ಇಪ್ಪತ್ತೈದಕ್ಕೆ ಕಾಲಿಟ್ಟು ಬೆಳೆವ
ಹೊಸ ದಿನದರ್ಶಿಕೆ ತರಲಿ ಸದಾ
ಸುಖ ಶಾಂತಿ ನೆಮ್ಮದಿಯ.
ಶುಭಾಶಯಗಳೊಂದಿಗೆ,
- ಪೂ. 01-01-2025.
ಮನದ ಪೆಟ್ಟಿಗೆಯೊಳಗೆ
ಮುದುಡಿಟ್ಟ ನೋವುಗಳ
ಹೊರ ತೆಗೆದು ಗಾಳಿಗೆ
ಉಫ್ ಎಂದು ಊದಿ ಬಿಡಿ
ಕಷ್ಟಗಳ ಮೆಟ್ಟಿ ನಿಂತು
ತಲೆಯೆತ್ತಿ ನಡೆಯುತ್ತ
ಸಾಧನೆಯ ಮೆಟ್ಟಿಲನು
ಏರಿ ಬಿಡಿ
ಹೃದಯದೊಳಗಿರುವ
ಪ್ರೀತಿಯನೆಲ್ಲ ಹನಿ ಹನಿಸಿ
ಹರಡುತ್ತ ಜಗದ ತುಂಬೆಲ್ಲಾ
ಪಸರಿಸಿ ಹರಿಸಿ ಬಿಡಿ
ಕಂಡಿರುವ ಕನಸುಗಳ
ನನಸಾಗಿಸುತ್ತ ನಗುತ
ಬದುಕಿನ ಪ್ರತೀ ಕ್ಷಣವನ್ನೂ
ಉಲ್ಲಾಸದಿಂದ ಕಳೆದು ಬಿಡಿ
ಭಾಷೆಯ ಕುಲುಮೆಯಿಂದ ಪುಟಿದೆದ್ದ ಕನ್ನಡ
ಕಲಿತು ಅರಿತವರಿಗೆ ಹೆಮ್ಮೆಯೆನಿಸುವ ಕನ್ನಡ
ವೇಷಗಳ ಹುಡುಕಿ ಕಳಚುವ ಕಸ್ತೂರಿ ಕನ್ನಡ
ಕನ್ನಡಿಗರ ನರನಾಡಿಯಲ್ಲಿ ಕನ್ನಡ, ಕನ್ನಡ, ಕನ್ನಡ
ರಾಜ್ಯೋತ್ಸವದ ಶುಭಾಶಯಗಳು
ಮಳೆಯಲ್ಲಿ ತೋಯ್ದ ಇಳೆ
ಸುತ್ತೆಲ್ಲಾ ತುಂಬಿದೆ ಹಸಿರು ಕಳೆ
ಎಲ್ಲೆಲ್ಲೂ ಹಣತೆ ದೀಪಗಳೇ
ಶುಭ ತರಲಿ ಈ ದೀಪಾವಳಿ
ಅವರಿವರ ಅರಿವಿನಲ್ಲಿ
ಅಳಿದುಳಿದ ಚೂರುಗಳಲಿ
ಅಡಗಿ ಕುಳಿತಿರುವ ಭಾವನೆಗಳಲಿ
ಬದ್ಧತೆಯ ಹುಡುಕಬಾರದು
ಅಂಗಲಾಚಿದರೂ ಎಟುಕದ
ಸಂಗಕೆಂದೂ ನಿಲುಕದ
ರಂಗು ಮೋಡಿ ಮನಸುಗಳಿಗೆ
ಸಿಲುಕಬಾರದು
ನೊಂದವರ ನೋಯಿಸುವ
ಬೆಂದವರ ಬೇಯಿಸುವ
ದುರುಳರ ಮಾತುಗಳಿಗೆ
ಬಲಿಯಾಗಬಾರದು
ಇಂದು ಇಂದಾಗಿರದ
ನಾಳೆ ನಾಳೆಯಾಗಿರದ
ಅಯೋಮಯ ಸ್ಥಿತಿಗೆ
ಬೀಳಬಾರದು
ಮೇಲು ಕೀಳೆಂಬ ಭ್ರಮೆಗೆ
ಮರುಳಾಗಿ ತಲೆ ಕೆಟ್ಟು
ನಮ್ಮನಮ್ಮ ಬೇರುಗಳ
ಮರೆಯಬಾರದು
ಎಷ್ಟೇ ಸಿರಿತನವಿರಲಿ
ಎಷ್ಟೇ ಬಡತನವಿರಲಿ
ಭಗವಂತನ ಧ್ಯಾನ ಬಿಟ್ಟು
ಮೆರೆಯಬಾರದು
ಇಹದ ಮಾತುಗಳ ಪರಕೆ ತಲುಪಿಸುವಂತೆ
ಮುಗಿಲ ಮೇಲಿನ ಬಯಲ ಅಣಕಿಸುವಂತೆ
ಸಾಟಿಯಿಲ್ಲದೆ ಬೆಳೆದು ಆಕಾಶದೊಳ ತೂರಿದಂತೆ
ವೃಕ್ಷವೊಂದಿಲ್ಲಿ, ಸ್ಫೂರ್ತಿ ತುಂಬುತ ನಿಂತಿದೆ
ಕೊಂಕು ಕೊಸರುಗಳ ಊದಿ ಗಾಳಿಗೆ ತೂರಿ
ಸಾಧನೆಯ ಮೆಟ್ಟಿಲುಗಳ ಒಂದೊಂದಾಗಿ ಏರಿ
ತನ್ನೊಳಗಿನ ಪರಿಮಳವ ಪರಿಸರಕೂ ಬೀರಿ
ನಂಜ ನುಂಗಿ ಅಂಜದಿರಲು, ಉದಾಹರಣೆಯಾಗಿದೆ
ಧೈರ್ಯದ ಛತ್ರಿ ಬಿಡಿಸಿ ಗಾಳಿಮಳೆಗಳ ಎದುರಿಸಿ
ಸಮಾಧಾನದ ದೋಣಿ ಬಳಸಿ ನೀರುನೆರೆ ನಿವಾರಿಸಿ
ತನ್ನೊಳಗೂ ಹೊರಗೂ ಮೇಲೂ ಕೆಳಗೂ ಸೇರಿಸಿ
ಆಶ್ರಯ ನೀಡಿ, ದಯಾಮಾಯಿಯಾಗಿ ಬದುಕಿದೆ
ಗಾಢ ಹಸಿರನು ಹರಡಿ ಪ್ರಾಣವಾಯುಗೆ ಜರಡಿ
ಹಿಡಿದು ಜೀವಗಳ ಉಳಿಸಿ ಬೆಳೆಸುವ ಗರಡಿ
ದಿನ ಮುಗಿದು ಮಲಗಿದರೆ ಆರಡಿ ಮೂರಡಿ
ಹೊತ್ತೊಯ್ಯುವ ಚಟ್ಟಕೂ, ಸಹಕಾರಿಯಾಗಿದೆ
ಆಸೆಯನ್ನು ಕೆದಕುತ್ತದೆ
ಅತಿಯಾಸೆ ಮೊಳೆಯುತ್ತದೆ
ದುರಾಸೆಯದು ಹೆಚ್ಚಾದರೆ
ನಿರಾಸೆ ಮನವನ್ನು ಸುಡುತ್ತದೆ
ಅರಿತರೆ ಅರಮನೆಯಾಗಿಸುತ್ತದೆ
ಅರಿಯದಿರೆ ಸೆರೆಮನೆಯಾಗಿಸುತ್ತದೆ
ಕಲಿಕೆಯನ್ನು ಅನಿವಾರ್ಯವಾಗಿಸುತ್ತದೆ
ಕಲಿಯದಿದ್ದರೆ ದಿಟವಾಗಿ ಕೈಸುಡುತ್ತದೆ
ಅತ್ತರೆ ನಗಿಸುತ್ತದೆ
ನಕ್ಕರೆ ರೊಚ್ಚಿಗೇಳುತ್ತದೆ
ಕೊಟ್ಟರೆ ಏರುತ್ತದೆ
ಕೊಂಡರೆ ಇಳಿಯುತ್ತದೆ
ಜಾಣ್ಮೆಯನ್ನು ಬೆಳೆಸಿ ಶ್ಲಾಘಿಸುತ್ತದೆ
ತಾಳ್ಮೆಯನ್ನು ಕಲಿಸಿ ಪರೀಕ್ಷಿಸುತ್ತದೆ
ಗಲಿಬಿಲಿಗೊಳಿಸಿ ತಲೆ ಕೆಡಿಸುತ್ತದೆ
ಭಯ ಹುಟ್ಟಿಸಿದರೂ ಜಯ ತರುತ್ತದೆ
ಬಿಸಿಲ ಕೋಲನು ಬಸಿದು
ಪಾನೀಯ ಮಾಡಿ
ಕುಡಿಯುವಾಕೆ
ಆಕಾಶ ತೊಟ್ಟಿಲಿಗೆ
ಗಾಳಿ ಬಳ್ಳಿಯ ಕಟ್ಟಿ
ಜೋಕಾಲಿ ಆಡುವಾಕೆ
ಪ್ರಾಣಿಪಕ್ಷಿಗಳೊಡನೆ
ಸರಸದಿಂದ ಸಲ್ಲಾಪ
ನಡೆಸುವಾಕೆ
ಭೂಪಾತ್ರೆ ಹಿಡಿದಲ್ಲಾಡಿಸಿ
ಮೂರ್ಖ ಮನುಜನ
ಸೊಲ್ಲಡಗಿಸುವಾಕೆ
ನಂಬಿದವರ ನಖಕೂ
ಕುತ್ತಾಗದಂತೆ ಸಲಹಿ
ಸಾಕುವಾಕೆ
ಶರಣು ಬಂದವರ
ಕೈ ಹಿಡಿದು ಸನ್ಮಾರ್ಗದಲ್ಲಿ
ನಡೆಸುವಾಕೆ
ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತಿದ್ದಾನೆ
ದೇಶವನ್ನು ಬೆಳೆಸಿ ಬೆಳೆಯುತ್ತಿದ್ದಾನೆ
ಕಳೆಗಳ ಕಿತ್ತೆಸೆಯಲು ಶ್ರಮಿಸುತ್ತಿದ್ದಾನೆ
ಹೆಜ್ಜೆಯಿಟ್ಟಲ್ಲಿ ಹೊಸತನ ತರುತ್ತಿದ್ದಾನೆ
ಮಲಗಿದವರ ತಟ್ಟಿ ಎಬ್ಬಿಸುತ್ತಿದ್ದಾನೆ
ಜ್ಞಾನ ದೀಪವನ್ನೆಲ್ಲೆಡೆ ಉರಿಸುತ್ತಿದ್ದಾನೆ
ಕಾಲಿಗೆ ಬುದ್ಧಿ ಹೇಳಿದವರಿಗೆ ತಕ್ಕ
ಬುದ್ಧಿಯನ್ನು ಕಲಿಸುತ್ತಿದ್ದಾನೆ
ಎಲ್ಲವನ್ನೂ ಗಮನಿಸುತ್ತಿದ್ದಾನೆ
ಎಲ್ಲದರಲ್ಲಿಯೂ ಆಸಕ್ತಿ ವಹಿಸುತ್ತಿದ್ದಾನೆ
ಎಲ್ಲರಿಗೂ ಸ್ಫೂರ್ತಿ ತುಂಬುತ್ತಿದ್ದಾನೆ
ಎಲ್ಲದಕ್ಕೂ ಹೆಗಲು ನೀಡುತ್ತಿದ್ದಾನೆ
ಖಡಾಖಂಡಿತ ಉತ್ತರ ನೀಡುತ್ತಿದ್ದಾನೆ
ಕೆಟ್ಟದ್ದನ್ನು ಮಟ್ಟ ಹಾಕುತ್ತಿದ್ದಾನೆ
ಒಳ್ಳೆಯದನ್ನು ಬೆಂಬಲಿಸುತ್ತಿದ್ದಾನೆ
ನಿಷ್ಕಳಂಕ ಪ್ರೀತಿ ಸೂಸುತ್ತಿದ್ದಾನೆ
ಪರರಿಗೆ ಮಾದರಿಯಾಗುತ್ತಿದ್ದಾನೆ
ದೇಶದುದ್ಧಾರಕ್ಕಾಗಿ ಜೀವ ಸವೆಸುತ್ತಿದ್ದಾನೆ
ದೇಶವಾಸಿಗಳೆಲ್ಲರೂ ತನ್ನವರೆನ್ನುತ್ತಾನೆ
ತನ್ನದೆಲ್ಲವನ್ನೂ ಅವರಿಗೇ ಮೀಸಲಿಟ್ಟಿದ್ದಾನೆ