Friday, September 19, 2025

ಆ ಮನೆ


ನಿನ್ನ ಮನೆಯಲ್ಲಿ ಜಗಳವಿಲ್ಲ

ಸ್ನೇಹದ ಸಿಂಚನವೇ ಎಲ್ಲಾ

ಈರ್ಷ್ಯೆ ಕಡು ದ್ವೇಷವೇ ಇಲ್ಲ 

ಪ್ರೀತಿ ಮಮತೆಯೇ ಎಲ್ಲಾ


ಅಲ್ಲಿ ಜಾತಿ ಮತವೆಂಬ ಬೇಧವಿಲ್ಲ

ಮೇಲು ಕೀಳೆಂಬ ತಾರತಮ್ಯವಿಲ್ಲ

ಹಿರಿಯರು ಕಿರಿಯರೆಂದಿಲ್ಲ 

ಶೈಶವ ತಾರುಣ್ಯ ಮುದಿತನವಿಲ್ಲ 


ಅಲ್ಲಿ ಸಾವು ನೋವುಗಳೇ ಇಲ್ಲ

ದುಗುಡ ದುಃಖ ದುಮ್ಮಾನವಿಲ್ಲ 

ನಲಿವು ತುಂಬಿಹುದು ಅಲ್ಲೆಲ್ಲಾ 

ಸದಾ ಸ್ವರ ಸರಿಗಮದ ಬೆಲ್ಲ


ಅಲ್ಲಿ ಇರುವುದೆಲ್ಲಾ ಸ್ವಚ್ಛ ಸುಂದರ

ನನಗಿಲ್ಲಿ ಅದೆಲ್ಲ ಇಲ್ಲದ ನಶ್ವರ

ನಾನೇಕೆ ಅಲ್ಲಿಲ್ಲವೆಂದು ತಿಳಿದಿಲ್ಲ

ನಾನೆಂದಲ್ಲಿಗೆ ಬರುವೆನೆಂಬರಿವೂ ಇಲ್ಲ


ಅಪ್ಪ ಅಮ್ಮ ಈಗಾಗಲೇ ಅಲ್ಲಿರುವರಲ್ಲ

ಅವರು ನನಗೇನೂ ಹೇಳಲೇ ಇಲ್ಲ

ನಾನೀಗ ಬಂದರಲ್ಲಿ ಬಹುಶಃ ಸ್ವಾಗತವಿಲ್ಲ

ಆಹ್ವಾನ ಬರದೇ ಹೋಗುವ ಮಾತೇ ಇಲ್ಲ


ನಿನಗಾವುದೇ ಆಮಿಷ ನೀಡಲು ಸಾಧ್ಯವಿಲ್ಲ

ಬಲವಂತದಿಂದ ಆಮಂತ್ರಣ ಸಿಗುವುದಿಲ್ಲ

ನಿನ್ನ ಧ್ಯಾನದಲ್ಲಿ ಕಳೆದರೆ ನಾ ಜೀವನವೆಲ್ಲ

ಕರೆಸಿಕೊಳ್ಳದೇ ನಿನಗೆ ಬೇರೆ ದಾರಿಯಿಲ್ಲ

Tuesday, September 16, 2025

ಅಚಿಂತ್ಯ

 

ದೈತೋಟದ ಮನೆ-ಮನದಿ 

ಮೊಳೆತ ಅಚಿಂತ್ಯ ಅಚ್ಚರಿಗೆ

ಇಂದು ಎರಡು ವರುಷಗಳು


ಮುದ್ದು ಕೂಸಿನ ಆಟಪಾಠದಲಿ 

ಅದೃಷ್ಟದ ಅಮಿತ ನೋಟದಲಿ 

ಸಂತಸದ ಸಂಗೀತ ಸುಧೆಯಿದೆ 


ಜನ್ಮ ದಿನದ ಶುಭ ಹಾರೈಕೆಯಲ್ಲಿ 

ಭವಿಷ್ಯದ ಭವ್ಯ ಮಿಲನದಲ್ಲಿ

ಪಿತನ ಪವಿತ್ರ ಕನಸು ಅಡಗಿದೆ


ರಕ್ತ ಸಂಬಂಧದ ವ್ಯಕ್ತ ಭಾವಕೆ

ಸುಪ್ತ ಮನಸಲಿ ಕೊಂಡಿಯಿದೆ

ಆಪ್ತ ವಾತ್ಸಲ್ಯದ ಗಿಂಡಿಯಿದೆ 


ಬೆಳೆವ ಮನಸಲಿ ಬೆಸೆವ ಪ್ರೀತಿಗೆ

ಜನಕನ ಜತನದ ಅಭಯವಿದೆ

ಅಪ್ಪನ ಅಪರಿಮಿತ ಪ್ರೇಮವಿದೆ

Saturday, September 06, 2025

ಪುಟ್ಟ ಭೂಮಿ

ಜನ್ಮ ದಿನದ ಶುಭಾಶಯ - ಭೂಮಿ ಬೆಂಗಳೂರು

೨೮-೦೮-೨೦೨೫


ವಿದೇಶದಲ್ಲಂಕುರಿಸಿ ಸ್ವದೇಶದಲ್ಲಿ ಜನಿಸಿದವಳು

ಕಾಲಲಂದುಗೆ ತೊಟ್ಟು ಪುಟ್ಟ ಹೆಜ್ಜೆಯನಿಟ್ಟವಳು

ತೊದಲು ನುಡಿಗಳಿಂದ ಎಲ್ಲರ ಮನವ ಗೆದ್ದವಳು

ಅಪರ್ಣ ಸಂತೋಷರ ಮಗಳು ಭೂಮಿ ಬೆಂಗಳೂರು


ಅಪರ್ಣ ಸಂತೋಷ ದಿಂದ ಪುಟ್ಟ ಭೂಮಿಯ 

ದೊಡ್ಡ ಭೂಮಿಗೆ ತಂದುದು ಇಪ್ಪತ್ತೆಂಟನೆಯ ಆಗಸ್ಟ್ 

ಏರಲಿವಳು ಮುಂದೆ ಯಶಸ್ಸಿನ ಎವರೆಸ್ಟ್ 

ಜನ್ಮ ದಿನದ ಶುಭಾಶಯ ನಿನಗೆ ಭೂಮಿ ಬೆಂಗಳೂರು


ಬುವಿಯ ಬುಟ್ಟಿಯಲರಳಿ ಪಸರಿಸಿದ ಹಸಿರು

ಅಪರ್ಣ ಸಂತೋಷರ ಜೀವನದ ಉಸಿರು

ಆನಂದದಿ ಸಾಗಲಿ ನಿನ್ನ ಜೀವನದ ತೇರು

ನೂರ್ಕಾಲ ಬಾಳು ನೀ ಭೂಮಿ ಬೆಂಗಳೂರು

Friday, September 05, 2025

ಎಂದೋ ಹುಟ್ಟಿರುವ ನಕ್ಷತ್ರಗಳು

 

ಎಂದೋ ಹುಟ್ಟಿರುವ ನಕ್ಷತ್ರಗಳು

ಇಂದಿಗೂ ಹೊಳೆಹೊಳೆದು ನಲಿಯುತ್ತವೆ

ಗುರಿಯಿಲ್ಲದ ಜೀವಗಳು ಗಲಿಬಿಲಿಯಲ್ಲಿ

ಎಂದೆಂದಿಗೂ ಎಲ್ಲೆಲ್ಲೋ ಅಲೆಯುತ್ತವೆ 


ಉಳಿಸಿರುವ ಗರ್ವದ ನಡೆ ನಡೆದು

ಗಳಿಸಿರುವ ಗೌರವವ ನುಂಗುತ್ತದೆ

ಅಳಿಸಿದ ಪ್ರೀತಿಯ ಹಿಂದೋಡುವ ಜೀವ

ಆತ್ಮ ದಹನದಲ್ಲಿ ಸಿಲುಕಿ ನಲುಗುತ್ತದೆ 


ಕಾಲಿಗೆ ಚುಚ್ಚುವ ಮುಳ್ಳುಗಳು

ಮೆದುಳನ್ನು ತಲುಪುತ್ತವೆ

ಹೃದಯ ತಟ್ಟುವ ನೆನಪುಗಳು

ಬಾಳನ್ನು ಹಸನಾಗಿಸುತ್ತವೆ


ಮನದಲ್ಲಿ ಅಶಾಂತಿಯ ಅಲೆಗಳೆದ್ದರೆ 

ಮನೆಗಳನ್ನು ಮುಳುಗಿಸುತ್ತವೆ

ಅಂಗಳದಲ್ಲಿ ಅರಳಿದ ಹೂವುಗಳು

ಮಂಗಳದ ಕಹಳೆ ಮೊಳಗಿಸುತ್ತವೆ


ಜಾತಿ ಧರ್ಮದ ಜಗಳಗಳು

ಜಗಲಿಯಲ್ಲಿ ಏಳುತ್ತವೆ

ಜನರ ಬುದ್ಧಿ ಸ್ತಿಮಿತದಲ್ಲಿದ್ದರೆ 

ಕಿಡಿ ಕಾರದೆ ಕರಗುತ್ತವೆ 


ಉಡಿಯಲ್ಲಿ ಕಟ್ಟಿಕೊಂಡ ನೋವು

ಬಿಡದೆ ಇಡಿಯಾಗಿ ಸುಡುತ್ತದೆ

ಕಡೆಯಲ್ಲಿ ಕೈ ಹಿಡಿದು ನಡೆಸಲು ಜೀವ

ಜಗದೊಡೆಯನ ಮೊರೆ ಹೋಗುತ್ತದೆ