Saturday, March 16, 2024

ದಾರಿಯುದ್ದಕ್ಕೂ

 

ಬೆಟ್ಟ ಬೆಟ್ಟಗಳ ಮೇಲೆ 

ಬಟ್ಟೆ ಹರಡಿದಂತೆ ನೀಲಾಕಾಶ

ಭೂಮಿ ತಾಯಿ ಹಸಿರುಟ್ಟಂತೆ 

ನಡುವೆ ಹೊಲಗಳ ವಿಶೇಷ 


ಇರುವೆಗಳ ಸಾಲಿನಂತೆ 

ವಾಹನಗಳ ಓಡಾಟ

ಬಿಸಿಯುಗುಳುವ ಚೆಂಡಿನಂತೆ

ಆ ಸೂರ್ಯನ ಆಟೋಟ


ತೆಂಗಿನ ಮರಗಳು, ಬಾಳೆಯ ಗಿಡಗಳು

ಕಾಫಿಯ ತೋಟದಿ ಅರಳಿದ ಹೂಗಳು

ಇಕ್ಕೆಲದಲ್ಲೂ ಪುಟ್ಟಪುಟ್ಟ ಮನೆಗಳು

ಅಲ್ಲಲ್ಲಿ ಕೆಲವೊಂದು ಅಂಗಡಿಗಳು


ಸೂರ್ಯಾಸ್ತದಲ್ಲಿ ತಂಪಾದ ಗಾಳಿ

ರಾತ್ರಿಯಲ್ಲಿ ಸುಳಿದ ತಂಗಾಳಿ

ನಿಶಾರಾಣಿ ಸುಂದರವಾಗಿ ಅರಳಿ

ಸುವಾಸನೆ ಸುತ್ತಿತು ಸುರುಳಿ ಸುರುಳಿ

Friday, March 15, 2024

ಎಚ್ಚರಿಕೆ

 

ಕೆಟ್ಟದೆಂಬುದರ ಕಟ್ಟಿಡದಿದ್ದರೆ

ಅದು ಒಳ್ಳೆಯದರ ಕತ್ತು ಹಿಸುಕಬಹುದು

ಕೆಟ್ಟದೆಂಬುದು ಒಳ್ಳೆಯದನ್ನು ಮೆಟ್ಟಿ ನಿಂದರೆ

ಒಳ್ಳೆಯದರ ಉಸಿರು ನಿಲ್ಲಬಹುದು


ಅಸತ್ಯವನ್ನು ಅರಳಲು ಬಿಟ್ಟರೆ

ಸತ್ಯವು ಅಲ್ಲಿಯೇ ಮುದುಡಬಹುದು

ಅಸತ್ಯವು ಸತ್ಯವನ್ನು ಕುಗ್ಗಿಸಿದರದು

ಸವಾಲಾಗಿ ಪರಿಣಮಿಸ ಬಹುದು


ಅಸುರರಿಗೆ ಅವಕಾಶ ಕೊಟ್ಟರೆ 

ಅಳತೆ ಮೀರಿ ಅಂಧಕಾರ ಮುಸುಕಬಹುದು

ಅಸುರರ ಅಟ್ಟಹಾಸ ತಾರಕಕ್ಕೇರಿದರೆ

ದೇವತೆಗಳ ಸ್ವರ ಕೇಳದಾಗಬಹುದು


ನಮ್ಮ ನಾವು ತಿದ್ದಿಕೊಳ್ಳದಿದ್ದರೆ

ಬೇರೆಯವರು ದೂರವಾಗ ಬಹುದು

ಬೇರೆಯವರ ಸ್ನೇಹವಿಲ್ಲದಿದ್ದರೆ

ಬದುಕು ಬರಡು ಎನಿಸ ಬಹುದು


ಅರ್ಥವಾಗಿ ಎಚ್ಚೆತ್ತುಕೊಳ್ಳದಿದ್ದರೆ

ಸಮಯ ಜಾರಿ ಹೋಗಬಹುದು

ಇರುವ ಸಮಯವ ಬಳಸದಿದ್ದರೆ 

ಬದುಕಿದ್ದೂ ವ್ಯರ್ಥವೆನಿಸಬಹುದು 

Tuesday, March 12, 2024

ಹನಿ ಹನಿ ಕೂಡಿದರೆ


ಒಂದು ಬೀಜ ಒಂದು ಮರ

ಒಂದು ಮರದಿಂದ ಹಲವು ಬೀಜ

ಹಲವು ಬೀಜಗಳು ಬೆಳೆದು ಹಲವು ಮರ

ಹಲವು ಮರಗಳಿಂದ ಕಾಡು


ಒಂದು ಪಾದ ಒಂದು ಹೆಜ್ಜೆ

ಒಂದೊಂದೇ ಹೆಜ್ಜೆ ಸೇರಿ ಹಲವು ಹೆಜ್ಜೆ

ಹಲವು ಹೆಜ್ಜೆಗಳು ಸೇರಿ ಕೆಲವು ಮೈಲು

ಕೆಲವು ಮೈಲುಗಳು ಸೇರಿ ಪಯಣ


ಒಂದು ನಲ್ಲಿ ಒಂದು ಹನಿ ನೀರು

ಒಂದೊಂದೇ ಹನಿ ಸೇರಿ ಒಂದು ಬೊಗಸೆ 

ಬೊಗಸೆ ಬೊಗಸೆ ಸೇರಿ ಹಲವು ತಂಬಿಗೆ

ಹಲವು ತಂಬಿಗೆಗಳಿಂದ ಬಾಲ್ಡಿ ನೀರು


ಒಂದು ನಾಣ್ಯ ಒಂದು ಪೈಸೆ

ಪೈಸೆ ಪೈಸೆಗಳು ಸೇರಿ ಒಂದು ರೂಪಾಯಿ

ಕೆಲವು ರೂಪಾಯಿಗಳು ಸೇರಿ ನೂರು ರೂಪಾಯಿ

ನೂರಾರು ರೂಪಾಯಿಗಳು ಸೇರಿ ಸಾವಿರಾರು

Monday, March 11, 2024

ಅನುಭವ ಸತ್ಯ

 

ಗೋಡೆ ಬದಿಯ ಮಣ್ಣಿಗೆ ನೀರೆರಚಿ ನೋಡಿ

ಮಣ್ಣು ಸಿಡಿದು ಗೋಡೆ ಕೆಸರಾಗುತ್ತದೆ

ಮನಸಿಗೆ ಒಂಥರಾ ಖುಷಿ ಎನಿಸುತ್ತದೆ


ಅದೇ ಗೋಡೆಗೆ ನೀರೇರಚಿ ನೋಡಿ

ಸಂಪೂರ್ಣ ತೊಳೆದು ಶುಭ್ರವಾಗುತ್ತದೆ

ಮೊದಲಿಗಿಂತ ಮಿಗಿಲಾದ ಖುಷಿ ಸಿಗುತ್ತದೆ


ತಿಳಿಗೊಳಕ್ಕೊಂದು ಕಲ್ಲೆಸೆದು ನೋಡಿ

ಅಲೆಅಲೆಯಾಗಿ ಉಂಗುರಗಳು ಏಳುತ್ತವೆ 

ಮನಸಿಗೆ ಮುದವೆನಿಸುತ್ತದೆ


ಅಲೆಯ ಉಂಗುರಗಳು ಅಳಿದು

ಕೊಳವು ತಿಳಿಯಾಗುವುದನ್ನು ನೋಡಿ

ಮನಸ್ಸು ತಲ್ಲಣ ರಹಿತ ಸುಖ ಪಡೆಯುತ್ತದೆ


ತೊಳೆದಾಗ, ತಿಳಿಗೊಂಡಾಗ ದೊರಕುವುದು

ಕಲಕಿ ಕದಡಿದಾಗ, ಕೆಸರೆರಚಿದಾಗ ಸಿಗುವುದಿಲ್ಲ 

ಎಂಬದು ಅನುಭವ ಸತ್ಯ, ಅದನು ಅರಿತು ನೋಡಿ

Friday, March 08, 2024

ನೆಮ್ಮದಿ


ಇಷ್ಟು ದಿನ ಎಲ್ಲಿದ್ದೆ ನೀನು

ಮೊದಲೇ ಯಾಕೆ ಕಾಣಲಿಲ್ಲ

ಎಲ್ಲಿಯೂ ಯಾಕೆ ಸಿಗಲಿಲ್ಲ


ಇಂದು ನೀನು ಎಲ್ಲಿಂದ ಬಂದೆ

ನನ್ನೊಡನೆಯೇ ಇರುವೆನೆಂದೆ

ಚಿಂತೆಗೆ ತರ್ಪಣ ಬಿಟ್ಟೆನೆಂದೆ


ಗುರಿಯ ದಾರಿ ತೋರುವೆ ಎಂದೆ 

ಅದರ ಕಡೆಗೆ ನಡೆಸುವೆ ಎಂದೆ

ಸದಾ ನನ್ನ ಹಿಂದೆ ಮುಂದೆ


ಸುತ್ತುತಿರುವೆ ಇನ್ನು ಮುಂದೆ

ನಾವಿನ್ನೆಂದಿಗೂ ಒಂದೇ ಎಂದೆ

ನೀನೇ ಆದಿ ಅಂತ್ಯವೆಂದೆ

ಅಮ್ಮ - ಮಗು

 

ಬಿಗಿಯಾದ ದಿರಿಸ ಧರಿಸಿ

ಕಷ್ಟ ಬರಿಸಿ ಅದನು ಭರಿಸಿ

ಬೆವರು ಸುರಿಸಿ ಮತ್ತೆ ಒರೆಸಿ

ದೂರ ಸರಿಸಿ ದುಃಖ ಮರೆಸಿ


ಅಪ್ಪನರಸಿ - ಅಮ್ಮ ನ ಅರಸಿ 

ಭಾರ ಹೊರಿಸಿ ಕಣ್ಣು ತೂಗಿಸಿ 

ಹಾಲು ತರಿಸಿ ಅದನು ಕುದಿಸಿ

ತಣಿಸಿ ಕುಡಿಸಿ ಸಮಾಧಾನಗೊಳಿಸಿ 


ದಿರಿಸ ತೆಗೆಸಿ ಒಗೆಸಿ ಒಣಗಿಸಿ

ಕಪಾಟಿಗೆ ಸೇರಿಸಿ ಬೀಗ ಜಡಿಸಿ

ಊಟ ಬಡಿಸಿ ತಿನ್ನಿಸಿ, ಬಾಯಿ ತೊಳೆಸಿ 

ಮಲಗಿಸಿ ಹೊದಿಕೆ ಹೊದೆಸಿ


ನೆತ್ತಿಗೊಂದು ಮುತ್ತನಿರಿಸಿ

ಜೋಗುಳ ಹಾಡಿ ನಿದ್ದೆಗೆಳೆಸಿ

ಸ್ವಪ್ನದಲ್ಲಿ ತೇಲಿಸಿ, ಮನಸಾರೆ ಹರಸಿ

ಬೆಳಗ್ಗೆ ಎಬ್ಬಿಸಿ ದಿರಿಸ ಧರಿಸಿ...

Thursday, March 07, 2024

ಕಾಲನ ಕೈವಾಡ

 

ಬೆರಳಲ್ಲಿ ಬೆಳೆ ಕಡಿತಗೊಂಡಿದೆ

ಮನದಲ್ಲಿ ಮರುಳು ಹೆಚ್ಚಾಗಿದೆ

ತನುವಲ್ಲಿ ಜಡ ತುಂಬಿಕೊಂಡಿದೆ


ಕಣ್ಣುಗಳಿಗೆ ಕಿಸುರು ತಡವಿದೆ 

ಕಾಲುಗಳ ಕೆರೆತ ಹೆಚ್ಚಾಗಿದೆ

ಕೈಗಳ ಕಸುವು ಕಡಿಮೆಯಾಗಿದೆ


ತಲೆಯಲ್ಲಿ ಚಿಂತೆ ವಿಪುಲವಾಗಿದೆ 

ಬಾಯಲ್ಲಿ ಬೈಗುಳ ಹೇರಳವಾಗಿದೆ

ಒಳ್ಳೆಯ ಮಾತು ಮರೆತೇ ಹೋಗಿದೆ


ಕೂದಲೂ ಹಲ್ಲೂ ಉದುರಿ ಹೋಗಿದೆ

ಕಾಲನ ಕೈವಾಡ ಎದ್ದು ಕಾಣುತ್ತಿದೆ

ಉಸಿರು ನಿತ್ಯ ದಿನಗಳ ಎಣಿಸುತ್ತಿದೆ 

ಇವಳು

 

ಉತ್ತಿ ಬಿತ್ತಿ ಬೆಳೆಯನೆತ್ತಿ

ಮಂದಿಗೆಲ್ಲ ಕಟ್ಟಿ ಬುತ್ತಿ

ಹೆಮ್ಮೆಯಿಂದ ತಲೆಯನೆತ್ತಿ

ನಡೆಯುವಳು ಗಟ್ಟಿಗಿತ್ತಿ


ಮುಂಜಾನೆದ್ದು ಮನೆಯ ಬಿಟ್ಟು

ವಾಹನದಲ್ಲಿ ಜೀವವಿಟ್ಟು 

ದುಡಿಮೆಗೆ ತಕ್ಕ ಸಮಯ ಕೊಟ್ಟು

ಗಳಿಸುವಳು ಹೊಟ್ಟೆಗೆ ಹಿಟ್ಟು


ದೇಶವನ್ನು ಆಳಿದವಳು

ವಿಮಾನವನ್ನು ಏರಿದವಳು

ಬಾಹ್ಯಾಕಾಶಕೆ ಹಾರಿದವಳು

ವಿಜ್ಞಾನದಲ್ಲಿ ಮುನ್ನಡೆದವಳು


ನಾಡಿ ಹಿಡಿದ ವೈದ್ಯೆಯಿವಳು

ವಿದ್ಯೆಯನ್ನು ಹಂಚಿದವಳು

ತಂತ್ರಜ್ಞಾನ ಪಡೆದವಳು

ಯಂತ್ರ ಚಾಲನೆಗೆ ನಿಂದವಳು


ಸಂಗೀತ ವಿದುಷಿಯಿವಳು

ನೃತ್ಯವನ್ನು ಮಾಡಿದವಳು

ಕ್ರೀಡೆಯಲ್ಲಿ ಭಾಗವಹಿಸಿ

ಚಿನ್ನವನ್ನು ಗೆದ್ದವಳು


ಮಂತ್ರವನ್ನು ಪಠಿಸುವಳು

ಪೂಜೆಯನ್ನು ಮಾಡುವಳು

ವಿವಿಧ ಖಾದ್ಯ ಕಜ್ಜಾಯಗಳ

ಅಡುಗೆ ಮಾಡಿ ಬಡಿಸುವಳು


ವ್ಯವಹಾರದಲ್ಲಿ ಎಂದಿಗೂ ಮುಂದು

ಸಂಸಾರದಲ್ಲಿ ಬೆನ್ನೆಲುಬಾಗಿ ನಿಂದು

ಮಮತೆಯ ಮಾತೆ ಅಂದೂ ಇಂದೂ

ಇವಳು ಎಲ್ಲರಿಗೂ ಪ್ರಿಯ ಬಂಧು

Wednesday, February 21, 2024

ನಾಲ್ಕು ದಿನಗಳ ಪಯಣ

 

ನಾಲ್ಕು ದಿನಗಳ ಈ ಪಯಣದಲ್ಲಿ

ನಾಲಗೆ ಹರಿಬಿಟ್ಟು ಜಗಳವೇಕೆ

ಇಹ ಮರೆತು ಹೊಡೆದಾಡುವುದೇಕೆ


ದಾರಿಯಲ್ಲಿ ಒಳ್ಳೆಯ ಮಾತಾಡುವುದಿಲ್ಲವೇಕೆ

ದಾಸನಾಗು ವಿಶೇಷನಾಗು ಎಂಬುದು

ಯಾರಿಗೂ ಹಿಡಿಸುವುದಿಲ್ಲವೇಕೆ 


ಎಲ್ಲಾ ಬೆರಳುಗಳೂ ಒಂದೇ ಅಳತೆಯವಲ್ಲ 

ಎಂಬುದನ್ನು ಅರಿಯುವುದಿಲ್ಲವೇಕೆ

ಹೊಂದಿಕೊಂಡು ಬದುಕುವುದಿಲ್ಲವೇಕೆ

 

ಅಂತ್ಯದಲ್ಲಿ ಆರಡಿ ಮೂರಡಿಯೆಂದು ತಿಳಿದಿದ್ದರೂ

ಮದವೇರಿ ಮಿತಿಮೀರಿ ಕಿತ್ತಾಡುವುದೇಕೆ 

ನಮ್ಮವರಿಂದಲೇ ನಾವು ದೂರವಾಗುವುದೇಕೆ

Sunday, February 18, 2024

ಯಾವುದು ಯಶಸ್ಸು ?

 

ಸಾವಿರಸಾವಿರ, ಕೋಟಿಕೋಟಿ ಗಳಿಸಿ

ಸ್ವಂತದವರಿಗೂ ನೀಡದೇ ಉಳಿಸಿ

ಸಹಾಯ ಕೇಳಿ ಬಂದರೂ ಕಡೆಗಣಿಸಿ, 

ಕೊನೆಯಲ್ಲಿ ನಿತ್ಯ ರೋಗಗಳಿಗೆ ಹಣವುಣಿಸಿ,

ನೆಮ್ಮದಿಯಿಲ್ಲದೇ ತೊಳಲುವುದೇ ?


ಒಡಹುಟ್ಟು, ರಕ್ತ ಸಂಬಂಧಿಗಳ ಕಷ್ಟಗಳಿಗೆ 

ಕಿವುಡು-ಕುರುಡಾಗಿ, ತಮ್ಮ ಕೈಕಾಲು-ಕತ್ತಿಗೆ 

ವಿವಿಧ ಆಭರಣಗಳ ಹೇರಿ, ಮಹಡಿ ಮೇಲೆ ಮಹಡಿ 

ಕಟ್ಟಿ, ಸಂಕಷ್ಟದಲ್ಲಿರುವರನ್ನು ಕರೆದು ಆಡಂಬರ

ಪ್ರದರ್ಶನ ಮಾಡುವ, ಹೀನ ಮನಸ್ಸಿನ ಹುಸಿತನವೇ ?


ಸೂರಿಲ್ಲದೇ, ಆಸರೆಯಿಲ್ಲದೇ ಹೊತ್ತಿನ ತುತ್ತಿಗಾಗಿ 

ಪರದಾಡುವವರಿಗೆ,  ಮೈಹಿಡಿಯಾಗಿ ಬೇಡುವವರಿಗೆ, 

ನಿಸ್ವಾರ್ಥದಿಂದ ನೆಲೆ-ಜಲ ನೀಡಿ ಕೈಹಿಡಿದು

ಅನಾಥ ಮಕ್ಕಳಿಗೆ ತಂದೆ-ತಾಯಿಯಾಗಿ ಪ್ರೀತಿ ನೀಡಿ

ಹಿರಿಜೀವಗಳಿಗೆ ಮಕ್ಕಳಾಗಿ ಸೇವೆ ಮಾಡುವುದೇ ?


ಸಾಕುವ ತೀಟೆ ತೀರಿದಾಗ, ಆರೋಗ್ಯ ತಪ್ಪಿದಾಗ,

ಕಂಡವರ ಮನೆ ಮುಂದೆ, ನಿಲ್ದಾಣಗಳಲ್ಲಿ,

ಬೀದಿಗಳಲ್ಲಿ ಬಿಟ್ಟು ಕೈತೊಳೆದುಕೊಳ್ಳುವ

ಪಾಪಿಗಳ ಅಸಡ್ಡೆಗೆ ಒಳಗಾದ, ಮೂಕ

ಪ್ರಾಣಿಗಳ ಹೊಟ್ಟೆ ತುಂಬಿಸಿ ಸಲಹುವುದೇ ?


ಬೆವರು ಹರಿಸಿ, ರಕ್ತ ಸುರಿಸಿ, ಕರ್ಮಯೋಗಿಗಳಾಗಿ

ದುಡಿದು, ತಮ್ಮಾಸೆಗಳಿಗೆ ಕಡಿವಾಣ ಬಿಗಿದು, 

ಒಂದೇ ಹೊತ್ತು ಉಂಡುಕೊಂಡು, ತಮ್ಮ

ಉದರಕ್ಕೆ ತಣ್ಣೀರ ಬಟ್ಟೆ ಬಿಗಿದುಕೊಂಡು,

ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ?


ಅಕ್ಷರ ಕಲಿಕೆಯ ವಿದ್ಯೆ ಇಲ್ಲದಿದ್ದರೂ

ತಮಗೆ ಬರುವ ಅಲ್ಪ ಕಾಸಿನಲ್ಲಿಯೂ ಪಾಲು 

ತೆಗೆದಿರಿಸಿ, ಎಲ್ಲಾ ಅಡ್ಡಿಗಳನ್ನೂ ಎದುರಿಸಿ,  

ಶುದ್ಧ ಮನೋಭಾವದೊಂದಿಗೆ ಆಸ್ಪತ್ರೆ ಕಟ್ಟಿಸಿ, 

ಸಾರ್ವಜನಿಕರಿಗೆ ಸಮರ್ಪಿಸುವುದೇ ?