ಋಣಮುಕ್ತನಾದ ಕ್ಷಣದಲ್ಲಿ
ಹರುಷ ತುಂಬಿದ ಮನದಲ್ಲಿ
ವರುಷ ಉರುಳಿದ ದಿನದಲ್ಲಿ
ಅರುವತ್ಮೂರರ ಹಾದಿಯಲ್ಲಿ
ಸಹಚಾರಿಣಿಯ ಒಲವಲ್ಲಿ
ಸಂತೋಷದ ಹೊನಲಲ್ಲಿ
ಪ್ರೀತಿಯ ಬಲದಲ್ಲಿ
ಎದೆಗುಂದದೆ ಛಲದಲ್ಲಿ
ಧೈರ್ಯದ ನಡೆಯಲ್ಲಿ
ಸಾಧನೆಯ ಹಾದಿಯಲ್ಲಿ
ಯಶಸ್ಸಿನ ಹೊಸ್ತಿಲಲ್ಲಿ
ನಿಂತಿರುವ ನಿನಗೆ ಸಾಟಿಯೆಲ್ಲಿ
ಋಣಮುಕ್ತನಾದ ಕ್ಷಣದಲ್ಲಿ
ಹರುಷ ತುಂಬಿದ ಮನದಲ್ಲಿ
ವರುಷ ಉರುಳಿದ ದಿನದಲ್ಲಿ
ಅರುವತ್ಮೂರರ ಹಾದಿಯಲ್ಲಿ
ಸಹಚಾರಿಣಿಯ ಒಲವಲ್ಲಿ
ಸಂತೋಷದ ಹೊನಲಲ್ಲಿ
ಪ್ರೀತಿಯ ಬಲದಲ್ಲಿ
ಎದೆಗುಂದದೆ ಛಲದಲ್ಲಿ
ಧೈರ್ಯದ ನಡೆಯಲ್ಲಿ
ಸಾಧನೆಯ ಹಾದಿಯಲ್ಲಿ
ಯಶಸ್ಸಿನ ಹೊಸ್ತಿಲಲ್ಲಿ
ನಿಂತಿರುವ ನಿನಗೆ ಸಾಟಿಯೆಲ್ಲಿ
ಅಂಖನಿಯ ಬರಹ ನೀ ಅಳಿಸಬಹುದು
ಲೇಖನಿಯ ಬರಹವನು ಅಳಿಸಬಹುದೇ
ಪರರ ಕ್ಷಮೆಯಾದರೂ ಬೇಡಿ ಪಡೆಯಬಹುದು
ನಿನ್ನ ಕ್ಷಮೆಯ ನೀ ಪಡೆಯಬಹುದೇ
ಸಂಕವನೂ ಸುಂಕವನೂ ಕಟ್ಟಬಹುದು
ಮಂಕಾಗಿರುವ ನಂಬಿಕೆಯ ನೀ ಗಳಿಸಬಹುದೇ
ಅಂಕೆಯಿಲ್ಲದೆ ಬಿಂಕವನು ತೋರಬಹುದು
ಕಳೆದ ಗೌರವವ ನೀ ಮರಳಿ ಪಡೆಯಬಹುದೇ
ಅಕ್ಕಿ ಆರಿಸಬಹುದು ಹೆಕ್ಕಿ ಜಾಳಿಸಬಹುದು
ಸೊಕ್ಕಿನಲಿ ಸಿಕ್ಕ ನಿನ್ನ ನೀ ಉಳಿಸಬಹುದೇ
ಉಕ್ಕಿ ಹಸಿರಾಗಬಹುದು ಬಿಕ್ಕಿ ಹಗುರಾಗಬಹುದು
ಹಳಸಿರುವ ಸ್ನೇಹವನು ನೀ ಮತ್ತೆ ಬೆಳೆಸಬಹುದೇ
ರವಿಗೆ ರಂಗೋಲಿ ಬಿಡಿಸಿ
ನೆರಳ ಜೊತೆ ಪೈಪೋಟಿ ನಡೆಸಿ
ದಶದಿಕ್ಕುಗಳಿಗೆಸಳುಗಳ ಹಾಸಿ
ನೋವುಗಳ ಗುಡಿಸಿ ಹಾರೈಸಿ
ನಲಿವಿನಿಂದ ನಗುತಿರುವ ವಿದ್ಯಕೋಮಲೇ
ತಾರಸಿಯ ತರುಣಿಯಿವಳು
ವಾರಸಿಯ ಹೆಮ್ಮೆಯಿವಳು
ಕೈತೋಟಕೆಲ್ಲ ಅರಸಿಯಿವಳು
ಬಾರಿಸುವಳು ಜಯದ ಭೇರಿ
ಹರುಷದಿಂದ ಬಾರಿಬಾರಿ ವಿದ್ಯಶ್ಯಾಮಲೇ
ಕುಂಡದಲಿ ಜನುಮ ತಳೆದು
ಗುಂಡಿಗೆಯ ಅದುಮಿ ಹಿಡಿದು
ಸಂಡಿಗೆಯ ಸಪ್ಪಳಕೆ ಮಂಡಿಯೂರಿ
ಮುಂದೆ ಸರಿದು ಕಂಡಿಯಿಂದ ಇಣುಕಿ ನೋಡಿ
ಚೆಂಡೆಯನು ಬಾರಿಸುವಳು ವಿದ್ಯಕಮಲೇ
ಒಳಗಿಂದ ಒದ್ದೊದ್ದು ಬರುವುದದು ಕೂಗು
ಮನಸು ಹೃದಯ ಒಟ್ಟಾಗಿ ಅದಕೆ ತಲೆ ಬಾಗು
ಕೂಗಿನ ಆಳ ಅರ್ಥವ ತಿಳಿದು ತಲೆದೂಗು
ನಿರ್ಧಾರ ತೆಗೆದುಕೊಳ್ಳುವಷ್ಟಾದರೂ ನೀ ಮಾಗು
ಹುದುಗದಂತೆ ನೋಡಿಕೋ ಕಾಲ ಕೆಳಗೆ ಜೌಗು
ಸರಿಯುವಂತೆ ನೋಡಿಕೋ ಒಳ್ಳೆತನದ ಸೋಗು
ಕರಗಬೇಕು ಪೂರ್ತಿಯಾಗಿ ದರ್ಪದ ಅರಗು
ಅರಗಬೇಕು ಸಂಪೂರ್ಣವಾಗಿ ನಿನ್ನ ತುಡುಗು
ಅರಿತುಕೊಂಡರೆ ನೀ ಸನ್ಮಾರ್ಗದ ಸೊಬಗು
ಎಲ್ಲೆಡೆಯಲ್ಲೂ ಪಸರಿಸುವುದು ಅದರ ಮೆರುಗು
ಹಿಡಿದು ನಡೆದರೆ ನಿತ್ಯವೂ ನೀ ಸತ್ಯದ ಅಲಗು
ಸುಲಭವಾಗಿ ಕಳೆವುದದು ನಿನ್ನ ಸಕಲ ಪಿಡುಗು
ರಜೆಯಿಂದು ಸಜೆಯಾಗಿಹುದು
ಪಕ್ಕದಮನೆ ಪೆಯಿಂಟ್ ವಾಸನೆಯಿಂದ
ತಲೆಕೆಟ್ಟು ಕರಡಾಗಿಹುದು
ಹಿಂದಿನ ಮನೆ ಜಾಯಿಂಟ್ ಜಗಳದಿಂದ
ಮುದುಡಿಹುದು ಪೆಯಿಂಟರ್ ನ
ವದನಾರವಿಂದ
ನೋಡಿದರೆ ಹೃದಯ ಕರಗುವುದಾತನ
ಅಸಹಾಯಕತೆಯಿಂದ
ಜಡಿಮಳೆಯಲೊಂದು ಹಿಡಿ
ಅಶನ ದೊರೆತರೆ ಸಾಕೆಂಬ ಕಿಡಿ
ಜನನ ಮರಣದೊಂದು ಗಡಿ
ಹಿಡಿದಿಡುವುದು ನಮ್ಮ ನಾಡಿ
ಬಾಳಬಟ್ಟೆಲಿ ಭಗವಂತನ ನೆನೆದುಬಿಡಿ
ಸತ್ಸಂಗದಲ್ಲಿ ಸದಾ ಮುಳುಗಿಬಿಡಿ
ಕಷ್ಟ ಕಿರಿಕಿರಿಗಳ ಮರೆತುಬಿಡಿ
ವಿಠಲ ನಾಮವನೊಮ್ಮೆ ಜಪಿಸಿಬಿಡಿ
ಇರುವಷ್ಟು ದಿನ ಅಲ್ಲಿಲ್ಲಿ ಕಾಡಿಬೇಡಿ
ಪಡೆಯಲು ಯಾಕಿಹುದು ಈ ಗಡಿಬಿಡಿ
ಭವಬಂಧನಗಳ ಕೊಂಡಿ ಕಳಚಿಬಿಡಿ
ಮುಕ್ತಿ ಮಾರ್ಗದೆಡೆಗೆ ಹೊರಟುಬಿಡಿ
ಅಕ್ಕ ನಿನ್ನ ಸೊಕ್ಕಿನಿಂದ
ಬೆಕ್ಕಿಗಿಂದು ಹಾಲಿಲ್ಲ
ಬೇರೆಡೆ ಹೋಗಿ ತಿನ್ನುವುದಕ್ಕೆ
ಪಾಪ ಅದಕೆ ಕಾಲಿಲ್ಲ.
ಕೇವಲ ಬಾಯಿ ಮಾತಿನಿಂದ
ಹಸಿವೆಯೆಂದೂ ನೀಗುವುದಿಲ್ಲ
ಅನುಸರಿಸುವ ಸಲಹೆಯಿಂದ
ಅರಮನೆ ಹಾಳಾಗುವುದಿಲ್ಲ.
ಅಳವಡಿಸುವ ಕ್ರಮಗಳಿಂದ
ಅಶಾಂತಿಯೆಂದೂ ಮೂಡುವುದಿಲ್ಲ
ಕಷ್ಟಪಟ್ಟು ಪ್ರಯತ್ನಿಸಿದರೆ ಮಾತ್ರ
ಬೆಕ್ಕಿನ ಜೀವ ಹೋಗುವುದಿಲ್ಲ.
ಜನಸಂಖ್ಯೆ ಹೆಚ್ಚಾದರೆ ವ್ಯವಸ್ಥೆ ಕೆಡುವಂತೆ
ಪದಸಂಖ್ಯೆ ಹೆಚ್ಚಾದರೆ ಪದ್ಯ ಕೆಡುತ್ತದೆ
ಅಂಕಿಸಂಖ್ಯೆ ಹೆಚ್ಚಾದರೆ ಲೆಕ್ಕ ಕೆಡುವಂತೆ
ಗಣಸಂಖ್ಯೆ ಹೆಚ್ಚಾದರೆ ಗುಣ-ಮನ ಎರಡೂ ಕೆಡುತ್ತದೆ
ಖಾಲಿ ಜಾಗಗಳಲಿ ಗಿಡ ನೆಡದಿದ್ದರೆ ಇಂದೇ
ಅಳುವೆ ನೀ ಮುಂದೆ ನೆಡಬೇಕಿತ್ತು ಅಂದೇ
ನೆಟ್ಟ ಗಿಡ ಬೆಳೆದು ಮರವಾಗಲೇನು ತಡ
ನೆಮ್ಮದಿಯ ಕ್ಷಣಗಣನೆ ಮನೆಮಂದಿ ಸಂಗಡ
ಮರದಿಂದ ಬೀಜ ಬಿದ್ದು ಹುಟ್ಟುವುದು ಗಿಡ
ಗಿಡದಿಂದ ಮರವಾಗಿ ತೀರುವುದು ನಿನ್ನ ಕಡ
ಮರಗಳು ಬೆಳೆದಂತೆ ಕಾಣಬಹುದು ಕಾಡ
ಗಿಡಬಳ್ಳಿ ಖಗಮೃಗಗಳ ಅಪೂರ್ವ ನಾಡ
ಹಸಿರ ಉಳಿಸಿದರೆ ಭವದ ಉಸಿರು ಸಾಯ
ಹಸಿರ ಉಳಿಸಿ ಬೆಳೆಸಲು ಹೊಂದು ದೃಢ ಧ್ಯೇಯ
ಮಕ್ಕಳಿಗೂ ಮರಿಗಳಿಗೂ ಮಾಡು ಸಹಾಯ
ಮರವುಳಿಸಿ ಬೆಳೆಸುವುದೇ ಉಳಿದಿರುವ ಉಪಾಯ
ಅಕ್ಕ ನಿನ್ನ ಬೆಕ್ಕಿಗೊಂದು ಬೇರೆ ಬಿಡಾರ
ಪಕ್ಕದಲ್ಲಿ ಹಾಸಿಕೊಂಡು ನಿನ್ನ ಗುಡಾರ
ಸಿಕ್ಕದಂತೆ ಕುಳಿತೆ ಏಕೆ ಬಹು ದೂರ
ಲೆಕ್ಕಕಿಲ್ಲ ಆಟಕಿಲ್ಲ ಎಂಬ ವಿಚಾರ
ಅರಿತ ಮೇಲೂ ಕಲಿತ ನೀನು ಏಗುವಿಯೇಕೇ
ಸರಿತಪ್ಪು ಗೊತ್ತಿದ್ದೂ ಕುಗ್ಗುವಿಯೇಕೆ
ಪರಿಪರಿಯ ಬೇಡಿಕೆಗೆ ಬಗ್ಗುವಿಯೇಕೆ
ಬರಿದೇ ಅಳತೆಯನ್ನು ಮೀರಿ ತಗ್ಗುವಿಯೇಕೆ
ಏಗಿದರೆ ಬೀಗುವರು
ಕುಗ್ಗಿದರೆ ಕಿಸಿಯುವರು
ಬಗ್ಗಿದರೆ ಗುದ್ದುವರು
ತಗ್ಗಿದರೆ ತುಳಿಯುವರು
ಅರಿತುಕೊಂಡು ಜಗದ ಪರಿಯ
ಬೆರೆತುಕೊಂಡು ಎಲ್ಲರೊಡನೆ
ಮರೆತು ಬಾಳು ಕಹಿಯನೆಲ್ಲ
ಅನುಭವಿಸು ಸಿಹಿಯನೆಲ್ಲ
ಬರೆಯುವುದು ಬಯಕೆಯಲ್ಲ
ಬಯಕೆಯಲ್ಲಿ ಅರ್ಥವಿಲ್ಲ
ಅರ್ಥ ಹುಡುಕಿದರೆ ವ್ಯರ್ಥವೆಲ್ಲ
ವ್ಯರ್ಥವೆಂದು ಬಿಡುವುದಿಲ್ಲ
ಬಿಟ್ಟರೆಂದೂ ಬರೆಯುವುದಿಲ್ಲ
ಬರೆವಣಿಗೆಯ ಎರವಣಿಯಲ್ಲಿ
ಎರವಣಿಯ ಪುರವಣಿಯೊಂದಿಗೆ
ಉರವಣೆಯ ಮೆರವಣಿಗೆಯಲ್ಲಿ
ಮೆರವಣಿಗೆಯ ಬರವಣಿಗೆ ಮುಂದುವರಿವುದು
ಬರೆಯುವುದಕ್ಕೆ ಬರವೇನು
ಬರದಿದ್ದರೂ ಬರೆದೇನು
ಬರೆದರೇನು ಬರೆಯದಿದ್ದರೇನು
ಯಾವುದನ್ನೂ ಲೆಕ್ಕಿಸದೇ ಬರೆಯುವೆನು
ಈಗೇನು ಮಾಡಲೆಂದು ನೊಂದು ಕುಳಿತಿರುವಾಗ
ಮಂಗನೊಂದು ಎದುರು ಬಂದು ಬಂಗಿ ಸೇದುತಿತ್ತು
ಅದರ ಸಂಗ ಮಾಡಲೆಂದು ನಿಂದು ನೋಡುವಾಗ
ಮಾಣಿಕ್ಯವ ಕೆಳಗೆ ಚೆಲ್ಲಿ ಗುಂಡು ನಲಿಯುತಿತ್ತು
ಮಂಗನ ಸಂಗವಾದರೆ ಪೆಂಗನಾಗ ಬೇಕು
ಬಂಗಿ ಸೇದೋ ಚಟದ ಫಲ ಅನುಭವಿಸ ಬೇಕು
ಅಂಗನೆಯ ರಂಗುಭಂಗಿ ಬದಲಾಗ ಬೇಕು
ಬಾಳ ಬತ್ತಿ ಹೊಸಕದಂತೆ ಬಿಗಿಯಾಗ ಬೇಕು
ಮರ್ಕಟದ ಮತ್ತಿನಾಟಕೆ ಕಿಚ್ಚೊಡ್ಡ ಬೇಕು
ಚಾಂಚಲ್ಯದ ಶಕಟಕ್ಕೊಂದು ಕಡಿವಾಣ ಬೇಕು
ಅಕಟಕಟ ಅನುಕಂಪ ಚಟಪಟಿಸ ಬೇಕು
ಗಟ್ಟಿ ಹೆಜ್ಜೆ ಇಟ್ಟು ನಡೆದು ಗುರಿ ಮುಟ್ಟ ಬೇಕು
ನೀನೊಂದು ತೀರ ಅವಳೊಂದು ತೀರ
ನಡುವೆ ಬಿದ್ದಿರುವುದು ಮಣ ಭಾರ
ಇರುವುದೊಂದೇ ಸೇರಿಸುವ ತೆಳುದಾರ
ತುಂಡಾದರೆ ಆಗುವುದು ಮನ ಭಾರ
ಸುತ್ತಮುತ್ತಲ ಸಂತೆಕಂತೆಯದು ಹೆಣಭಾರ
ಕಿವಿಗೊಟ್ಟು ಕೆಡಿಸದಿರಿ ನಿಮ್ಮ ವ್ಯವಹಾರ
ಬದುಕನೇ ಮಾಡದಿರಿ ಒಂದು ವ್ಯಾಪಾರ
ನಿಮಗೆ ನೀವೇ ಕಂಡುಕೊಳ್ಳಿ ಉತ್ತಮ ಪರಿಹಾರ
ಬಳುಕಿದ ಬಳ್ಳಿಯಲ್ಲೊಂದು ಊಸರವಳ್ಳಿ
ಬಣ್ಣ ಬದಲಾದರೂ ಕಣ್ಣು ಕುರುಡಾದರೂ
ಕಡಿಮೆಯಾಗದ ತುರಿಕೆಯ ಮಂಗರವಳ್ಳಿ
ಹುಣಿಸೆ ನೀರಲಿ ತೊಳೆದುಕೊಳ್ಳಿ
ಮೆಣಸು ಹಾಕಿ ಅರೆದುಕೊಳ್ಳಿ
ಗೊಜ್ಜು ಮಾಡಿ ತಿಂದುಕೊಳ್ಳಿ
ಅನುವಿನ ತನುವಿನ ಅಂಶವು ಜನಿಸಿದೆ
ಗೌರವ ಪ್ರೀತಿಯು ಎಲ್ಲೆಡೆ ಹರಡಿದೆ
ತತ್ಸಮ ಸಂತಸ ತುಂಬುತ ಹರಿದಿದೆ
ಮನಸಿನ ಮಲ್ಲಿಗೆ ಸೌರಭ ಸೂಸಿದೆ
ದೈವದ ಕೃಪೆಯು ಎಲ್ಲರ ಮೇಲಿದೆ
ತೋರಿಕೆಯಿಲ್ಲದೆ ಸರಳವೇ ಆದರೂ
ಟಂಕನ ಝಣಝಣ ಕಿವಿಯಲಿ ತುಂಬಿದೆ
ಮನೆಯಲೂ ಮನದಲೂ ನೆಮ್ಮದಿ ಮೂಡಿದೆ
೦೧.
ಪದಗಳಿಗೆ ಬಸಿರಾಗಿ,
ಸಮಯಕ್ಕೆ ಸರಿಯಾಗಿ
ಉಸಿರು ಹಿಡಿದು ಬಲವಾಗಿ
ತಿಣುಕಿದರಷ್ಟೇ ಪದ್ಯ ಹುಟ್ಟುವುದು
೦೨.
ಹಬ್ಬಗಳ ಸಂಗಮ
ಸಂಸ್ಕೃತಿಗಳ ಸಮಾಗಮ
ಹರಡುವುದು ಘಮಘಮ
ಹಿರಿ-ಕಿರಿಯರೆಲ್ಲರಿಗೂ ಸಮಸಮ
೦೩.
ಹಗಲು ರಾತ್ರಿಯಲ್ಲ ರಾತ್ರಿ ಹಗಲಲ್ಲ
ನೀನು ನಾನಲ್ಲ ನಾನು ನೀನಲ್ಲ
ಎಂದಿಗೂ ಹೋಲಿಕೆ ಸರಿಯಲ್ಲ
ಇದನರಿತರೆ ಸಾಕಲ್ಲ, ಕೀಳರಿಮೆ ಬೇಕಿಲ್ಲ
೦೪.
ಭಾವನೆಗಳ ಏರುಪೇರು ಬರಲಿ ಬಿಡು
ಜೀವನದ ಸಾರವನ್ನು ಅನುಭವಿಸಿ ಬಿಡು
ಭವಂತಿ ಭಾರವನ್ನು ಭಗವಂತನಿಗೆ ಕೊಡು
ಆಗುವುದು ಬದುಕು ನೋಡು ಸುಖದ ಗೂಡು
ಉಂಡ ಮೇಲೆ ಕುಡಿಯಿರಿ ಬಿಸಿಬಿಸಿ ನೀರು ಹಾಲು
ಹೊಟ್ಟೆಯುಬ್ಬರ ಶಮನದಲ್ಲಿ ಇದಕೆ ಸಿಂಹಪಾಲು
ಚಿಟಿಕೆ ಓಮ ಸೇರಿಸಿದರೆ ನಿವಾರಿಸುವುದು ಸವಾಲು
ಆಗಲು ಬಿಡದು ನಿಮ್ಮನ್ನು ಎಂದಿಗೂ ಕಂಗಾಲು
ಸುಖ ನಿದ್ರೆ ನಿಮ್ಮದೇ ನಿತ್ಯ ಇರುಳು
ಸಂತೋಷದ ಕ್ಷಣಗಳು ನಿಮಗೆ ಸಾಲುಸಾಲು
ಶುಚಿಯಾಗಿ ಇಟ್ಟುಕೊಳ್ಳಿ ನಿಮ್ಮ ಕೈ-ಕಾಲು
ಆರೋಗ್ಯ ಉಳಿಸುವಲ್ಲಿ ಇದರದು ಸಮಪಾಲು
ಬೆಳಕಿನಲ್ಲಿ ಬವಳಿದಂತೆ ಕುಳಿತಿರುವ ಕಂದ
ಬೆದರ ಬೇಡ ಬೆನ್ನಿಗಿಹುದು ಅಭಯ ಕಬಂಧ
ಬೆಳಗು ನೀ ನಂದಾದೀಪ ಆನಂದದಿಂದ
ಅಂಕೆಯಿಲ್ಲದ ಸಂಖ್ಯೆಯಲ್ಲಿ ಮಿರುಗುವ ಚಂದ
ಕಪ್ಪು ಕತ್ತಲ ತೊಳೆದಿರುವ ದೀಪಗಳ ಪ್ರಬಂಧ
ಘಮಘಮಿಸುವುದು ಸುತ್ತಲೆಲ್ಲ ಪವಿತ್ರ ಶ್ರೀಗಂಧ
ಆಗಸದಲ್ಲಿ ಹರಡಿರುವ ಹುಣ್ಣಿಮೆಯ ಅಂದ
ಪಡೆದದನು ಬೆಳಗಲಿ ನಿನ್ನ ವದನಾರವಿಂದ
ತಿಂದ ಮೇಲೆ ಕೈಯನ್ನು ತೊಳೆಯಲೇ ಬೇಕು
ಉಂಡ ಮೇಲೆ ತಟ್ಟೆಯನ್ನು ಬೆಳಗಲೇ ಬೇಕು
ಹೊರಗಿಂದ ಬಂದು ಸ್ನಾನ ಮಾಡಲೇ ಬೇಕು
ಚಂದದಿಂದ ಮಾತುಗಳ ಆಡಲೇ ಬೇಕು
ಸಂಜೆ ಹೊತ್ತು ದೀಪವನ್ನು ಹಚ್ಚಲೇ ಬೇಕು
ಭಕುತಿಯಿಂದ ಕೈಮುಗಿದು ಬೇಡಲೇ ಬೇಕು
ಹಿರಿಯರ ಪಾದಸ್ಪರ್ಶ ಮಾಡಲೇ ಬೇಕು
ಕಿರಿಯರಿಗೆ ಮಮತೆಯನ್ನು ನೀಡಲೇ ಬೇಕು
ಇಷ್ಟವಿಲ್ಲದಿದ್ದರೂ ಕಷ್ಟವನ್ನು ಪಡಲೇ ಬೇಕು
ನಷ್ಟವಾದರೂ ಧಾರ್ಷ್ಟ್ಯವನ್ನು ತೋರಲೇ ಬೇಕು
ಪ್ರಾಮಾಣಿಕ ಬದುಕನ್ನು ಬದುಕಲೇ ಬೇಕು
ಅಂತಿಮ ನಿಲ್ದಾಣದವರೆಗೆ ನಡೆಯಲೇ ಬೇಕು
ಇಂದು ಊಟಕ್ಕೆ ಸಾರು, ಇದನು ಕೇಳಿದವರು ಯಾರು
ತಿಂದು ಉಪ್ಪು ಕಮ್ಮಿ ಎಂದು ಹೇಳಿದವರು ಯಾರು
ಬಂದು ನಿಂದು ಬೆಂದು ಜೊತೆಗೂಡಿದವರು ಯಾರು
ಎಂದು ನೀ ಸಾರು, ಬೇಕಾದರೆ ಬೇಗ ಬಳಿಸಾರು
ಊಟದಲ್ಲಿ ಖಚಿತ ಉಚಿತ ನಾರು
ಇಲ್ಲವೆಂದು ಗೊಣಗಿದವರು ಯಾರು
ಕಷ್ಟ ಗೊತ್ತಿಲ್ಲದಿರುವುದಕ್ಕೇ ಕೊಳಕು ನಾರು
ಬೇಡ ಬರೀ ಒಣ ಮಾತಿನ ದರ್ಬಾರು
ಅಸಾಧ್ಯವನ್ನು ಸಾಧ್ಯವಾಗಿಸ ಬಹುದೇ
ನೀ ಮನಸು ಮಾಡಿದರದು ಸಾಧ್ಯ
ಸಾಧ್ಯವನ್ನು ಅಸಾಧ್ಯವಾಗಿಸ ಬಹುದೇ
ಇಲ್ಲಸಲ್ಲದುದಕ್ಕೆ ಕಿವಿಗೊಟ್ಟರೆ ಅದೂ ಸಾಧ್ಯ
ಸಾಧ್ಯಕ್ಕೆ ' ಅ ' ಸೇರಿದರಷ್ಟೇ ಅಸಾಧ್ಯ
' ಅ ' ವರಿವರ ಮಾತು ಕೇಳದಿರು ಸದ್ಯ
ಅರಿತರಂತರಾತ್ಮದ ಮಾತೇ ನೈವೇದ್ಯ
ಆಗಷ್ಟೇ ಗೆಲುವಿನ ಮೆಟ್ಟಿಲೇರಲು ಸಾಧ್ಯ
ಅಪ್ಪ ಇಲ್ಲ ಅಮ್ಮ ಇಲ್ಲ
ಇದ್ದಾಗ ಬೆಲೆ ಕೊಡಲಿಲ್ಲ
ಪ್ರೀತಿ ಮಮತೆ ಸಾಲಲಿಲ್ಲ
ಈಗ ಪಡೆವ ಭಾಗ್ಯವಿಲ್ಲ
ಕೊಟ್ಟ ಕಿರುಕುಳ ಕಮ್ಮಿ ಇಲ್ಲ
ಪಶ್ಚಾತ್ತಾಪ ಪಟ್ಟೇ ಇಲ್ಲ
ನಿನಗದರ ಅರಿವೇ ಇಲ್ಲ
ಅವರು ತಿಳಿಯಗೊಡಲಿಲ್ಲ
ಅವರ ಮನವ ಅರಿಯಲಿಲ್ಲ
ಜೊತೆಗೆ ಸಮಯ ಕಳೆಯಲಿಲ್ಲ
ಪ್ರೀತಿಯಂತೂ ತೋರಲಿಲ್ಲ
ಮಾತು ಕೂಡ ಆಡಲಿಲ್ಲ
ವಾಸ್ತವವ ಗ್ರಹಿಸಲಿಲ್ಲ
ತಕ್ಷಣ ಎಚ್ಚೆತ್ತುಕೊಳಲಿಲ್ಲ
ಕಳಕೊಂಡ ಮೇಲೆ ಅವರೇ ಎಲ್ಲಾ
ಆದರೇನೂ ಫಲವಿಲ್ಲ
ದಿನದಲ್ಲಿ ದಯೆಯಿಂದ
ದಯೆಯಲ್ಲಿ ಪ್ರೀತಿಯಿಂದ
ಪ್ರೀತಿಯಲ್ಲಿ ಹೊಳಪಿಂದ
ಕಳೆಗೊಂಡ ಕಣ್ಮಣಿ ಬೆಳಗು
ದೀಪಾವಳಿಗೆ ದೀವಿಗೆ ಹೊತ್ತು
ಭಾರವಾಗಿ ಬೇಸತ್ತು
ಬಸವಳಿದ ಈ ಹೊತ್ತು
ಬೆಂದು ನಿಂದಿರುವ ಮಧ್ಯಾಹ್ನ
ಯೌವ್ವನದ ಎಸಳ ಸವಿ
ಜವ್ವನದ ಹೆಗಲೇರಿ
ಗವ್ವನೆಯ ನಿಶೆಗೆ ಬೆದರಿ
ಸುಮ್ಮನೇ ಕುಳಿತ ಸಂಜೆ
ಬದಲಾವಣೆಯನ್ನು ಬರಲು ಬಿಡು
ಕಾಡುವ ಅಹಮನ್ನು ಬದಿಗಿಡು
ಕಣ್ಣ ಪಟ್ಟಿಯ ಸರಿಸಿ ಬಿಡು
ಮನದ ಬಾಗಿಲನು ತೆರೆದು ಬಿಡು
ಹೃದಯ ಕವಾಟವ ಬಿಗಿದಿಡು
ಟೀಕೆಟಿಪ್ಪಣಿಗೆ ಕಿವಿಗೊಡು
ಆಲೋಚನಾ ಕ್ರಮವನ್ನು ಹರಿತ ಮಾಡು
ಪರಪ್ರಶಂಸೆಯ ಕಡಿಮೆ ಮಾಡು
ಸ್ವನಿಂದೆಯ ಬಿಟ್ಟುಬಿಡು
ನಿನ್ನೊಳಗಿನ ಧ್ವನಿಗೆ ಗಮನ ಕೊಡು
ಪ್ರಾಮಾಣಿಕವಾಗಿ ಪ್ರಯತ್ನ ಪಡು
ಅರಿತವರಿಗೆ ಅರಿವಿಲ್ಲದೊಡೆ
ನುರಿತವರಿಗೆ ಛಲವಿಲ್ಲದೊಡೆ
ಬೆರೆತವರಿಗೆ ಬಲವಿಲ್ಲದೊಡೆ
ಕಾರ್ಯವನೆಸಗುವುದೆಂತು
ಕಣ್ಣಿದ್ದೂ ಕುರುಡಾದೊಡೆ
ಕಿವಿಯಿದ್ದೂ ಕಿವುಡಾದೊಡೆ
ಕಾಲಿದ್ದೂ ಕುಂಟಾದೊಡೆ
ಜೀವಾತ್ಮಕ್ಕೆ ತೃಪ್ತಿಯೆಂತು
ಅಲ್ಪಕ್ಕೆ ಉಬ್ಬಿದೊಡೆ
ಸ್ವಲ್ಪಕ್ಕೆ ಸೊಕ್ಕಿದೊಡೆ
ಸಮಚಿತ್ತ ಸರಿದೊಡೆ
ಆತ್ಮವಿಶ್ವಾಸಕ್ಕೆ ಜಯವೆಂತು
ಬೆಳಕಿನ ಹಬ್ಬದ ಬೆಳಗಲಿ ಇಂದು
ಕವಿದಿಹ ಕತ್ತಲೆ ಕರಗಲಿ
ಬಾನಲೂ ಬುವಿಯಲೂ ಎಲ್ಲೆಲ್ಲೂ
ಭರವಸೆ ಬೆಳಕದು ಹರಡುತಲಿರಲಿ
ಹಬ್ಬದ ಹರುಷವು ಹಸಿಯಾಗಿರಲಿ
ಹೃದಯದ ಭಾವನೆ ಬೆಚ್ಚಗೆ ಇರಲಿ
ಪ್ರೀತಿಯ ದೀಪವು ಬೆಳಗುತಲಿರಲಿ
ಸಂಬಂಧದ ಸಂಕೋಲೆ ಬಿಗಿಯಾಗಿರಲಿ
ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು.