Sunday, February 18, 2024

ಯಾವುದು ಯಶಸ್ಸು ?

 

ಸಾವಿರಸಾವಿರ, ಕೋಟಿಕೋಟಿ ಗಳಿಸಿ

ಸ್ವಂತದವರಿಗೂ ನೀಡದೇ ಉಳಿಸಿ

ಸಹಾಯ ಕೇಳಿ ಬಂದರೂ ಕಡೆಗಣಿಸಿ, 

ಕೊನೆಯಲ್ಲಿ ನಿತ್ಯ ರೋಗಗಳಿಗೆ ಹಣವುಣಿಸಿ,

ನೆಮ್ಮದಿಯಿಲ್ಲದೇ ತೊಳಲುವುದೇ ?


ಒಡಹುಟ್ಟು, ರಕ್ತ ಸಂಬಂಧಿಗಳ ಕಷ್ಟಗಳಿಗೆ 

ಕಿವುಡು-ಕುರುಡಾಗಿ, ತಮ್ಮ ಕೈಕಾಲು-ಕತ್ತಿಗೆ 

ವಿವಿಧ ಆಭರಣಗಳ ಹೇರಿ, ಮಹಡಿ ಮೇಲೆ ಮಹಡಿ 

ಕಟ್ಟಿ, ಸಂಕಷ್ಟದಲ್ಲಿರುವರನ್ನು ಕರೆದು ಆಡಂಬರ

ಪ್ರದರ್ಶನ ಮಾಡುವ, ಹೀನ ಮನಸ್ಸಿನ ಹುಸಿತನವೇ ?


ಸೂರಿಲ್ಲದೇ, ಆಸರೆಯಿಲ್ಲದೇ ಹೊತ್ತಿನ ತುತ್ತಿಗಾಗಿ 

ಪರದಾಡುವವರಿಗೆ,  ಮೈಹಿಡಿಯಾಗಿ ಬೇಡುವವರಿಗೆ, 

ನಿಸ್ವಾರ್ಥದಿಂದ ನೆಲೆ-ಜಲ ನೀಡಿ ಕೈಹಿಡಿದು

ಅನಾಥ ಮಕ್ಕಳಿಗೆ ತಂದೆ-ತಾಯಿಯಾಗಿ ಪ್ರೀತಿ ನೀಡಿ

ಹಿರಿಜೀವಗಳಿಗೆ ಮಕ್ಕಳಾಗಿ ಸೇವೆ ಮಾಡುವುದೇ ?


ಸಾಕುವ ತೀಟೆ ತೀರಿದಾಗ, ಆರೋಗ್ಯ ತಪ್ಪಿದಾಗ,

ಕಂಡವರ ಮನೆ ಮುಂದೆ, ನಿಲ್ದಾಣಗಳಲ್ಲಿ,

ಬೀದಿಗಳಲ್ಲಿ ಬಿಟ್ಟು ಕೈತೊಳೆದುಕೊಳ್ಳುವ

ಪಾಪಿಗಳ ಅಸಡ್ಡೆಗೆ ಒಳಗಾದ, ಮೂಕ

ಪ್ರಾಣಿಗಳ ಹೊಟ್ಟೆ ತುಂಬಿಸಿ ಸಲಹುವುದೇ ?


ಬೆವರು ಹರಿಸಿ, ರಕ್ತ ಸುರಿಸಿ, ಕರ್ಮಯೋಗಿಗಳಾಗಿ

ದುಡಿದು, ತಮ್ಮಾಸೆಗಳಿಗೆ ಕಡಿವಾಣ ಬಿಗಿದು, 

ಒಂದೇ ಹೊತ್ತು ಉಂಡುಕೊಂಡು, ತಮ್ಮ

ಉದರಕ್ಕೆ ತಣ್ಣೀರ ಬಟ್ಟೆ ಬಿಗಿದುಕೊಂಡು,

ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ?


ಅಕ್ಷರ ಕಲಿಕೆಯ ವಿದ್ಯೆ ಇಲ್ಲದಿದ್ದರೂ

ತಮಗೆ ಬರುವ ಅಲ್ಪ ಕಾಸಿನಲ್ಲಿಯೂ ಪಾಲು 

ತೆಗೆದಿರಿಸಿ, ಎಲ್ಲಾ ಅಡ್ಡಿಗಳನ್ನೂ ಎದುರಿಸಿ,  

ಶುದ್ಧ ಮನೋಭಾವದೊಂದಿಗೆ ಆಸ್ಪತ್ರೆ ಕಟ್ಟಿಸಿ, 

ಸಾರ್ವಜನಿಕರಿಗೆ ಸಮರ್ಪಿಸುವುದೇ ?

No comments: