Wednesday, April 16, 2025

ಎಂತು

ದಾರಿ ಖರ್ಚಿಗೆ ದ್ರಾಕ್ಷೆಯಿಟ್ಟು 

ದಾಹವಾದಾಗ ತಿನ್ನ ಹೊರಟು 

ಹುಳಿಯಾಯಿತೆಂದು ಗೊಣಗಿದೊಡೆಂತು 


ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ

ಜುಟ್ಟಿಗೆ ಮಲ್ಲಿಗೆಯೇರಿಸಿ 

ಕೈಖಾಲಿಯಾಯಿತೆಂದು ಪರಿತಪಿಸಿದರೆಂತು


ದುಡಿಯುವ ವಯಸ್ಸಿನಲ್ಲಿ

ಆಲಸಿಯಾಗಿ ಅಲೆದು

ವಯಸ್ಸಾದಾಗ ಭದ್ರತೆಗೆ ಹಪಹಪಿಸಿದರೆಂತು 


ಇರುವ ಸಂಬಂಧಗಳ 

ಉಳಿಸಿಕೊಳ್ಳದೆ ದೂರ ಮಾಡಿ

ಆಮೇಲೆ ಪಶ್ಚಾತ್ತಾಪ ಪಟ್ಟರೆಂತು 


ವರ್ತಮಾನದಲ್ಲಿ ಗಮನಿಸದೆ

ಮದದಿಂದ ನಡೆದು 

ಭವಿಷ್ಯದಲ್ಲಿ ಕಂಗಾಲಾದೊಡೆಂತು


ಸಂತೋಷದಲ್ಲಿ ಶಿವನ ನೆನೆಯದೆ 

ದುಗುಡದಲ್ಲಿ ದೆಸೆಗೆಟ್ಟು 

ದಯನೀಯವಾಗಿ ಬೇಡಿಕೊಂಡರೆಂತು

No comments: