Thursday, January 21, 2010

" ನನ್ನ ಎರಡು ರೂಪಾಯಿ "


ಚಿತ್ರಕೃಪೆ: ಗೂಗಲ್



ನನಗಾಗ ಏಳು ವರ್ಷ. ಪೇಪರಲ್ಲಿ ಪದಬಂದದ ಸ್ಪರ್ಧೆ ಬಂದಿತ್ತು. ಅದನ್ನು ತುಂಬಿಸಿದ ಚಿಕ್ಕಪ್ಪ, ನನ್ನ ಹೆಸರು ಹಾಕಿ ಕಳಿಸಿದ್ರು. ಒಂದು ದಿನ, ನನ್ನನ್ನು ಹುಡುಕಿಕೊಂಡು ‘ಎರಡು ರೂಪಾಯಿ’ ಮನಿ ಆರ್ಡರ್ ಬಂದಾಗಲೇ ಗೊತ್ತಾಗಿದ್ದು, ನನಗೆ ಬಹುಮಾನ ಬಂದಿದೆ ಅಂತ. ಅದೆಲ್ಲಿತ್ತೋ, ಆ ಕ್ಷಣದಲ್ಲಿ ಚಿಕ್ಕಪ್ಪನ ಮೇಲೆ ಅತಿಯಾದ ಪ್ರೀತಿ, ಅಭಿಮಾನ ಉಕ್ಕಿ ಬಂತು, ಆಜನ್ಮ ಋಣಿಯಾಗಿರುವಂಥ ಕೃತಜ್ಞತಾ ಭಾವ.

ಆಹಾ ! ನನ್ನ ಹೆಸರಲ್ಲಿ, ಅದೂ ಎರಡು ರೂಪಾಯಿ ಅಂದ್ರೆ ಸಾಮಾನ್ಯವೇ!! ಎಂಥ ಹೆಮ್ಮೆ!! ನನಗಾಗ ಪೈಸೆ, ರೂಪಾಯಿಗಳ ಲೆಕ್ಕಾಚಾರ ಅರ್ಥವಾಗುತ್ತಿರಲ್ಲಿಲ್ಲವಾದ್ದರಿಂದ, ಏನೋ ಲಕ್ಷ ರೂಪಾಯಿ ಬಂದಂಥ ಸಂತಸ, ಹೆಮ್ಮೆ, ಅಹಂಕಾರ.

ಈ ದುಡ್ಡು ಜೋಪಾನ ಮಾಡುವ ಜವಾಬ್ದಾರಿ ಬಿತ್ತು ನಂಗೆ. ಅಮ್ಮನ ಕೈಲಿ ಕೊಟ್ಟು ಜಾಗ್ರತೆಯಾಗಿ ಇಡಲು ಹೇಳಿ, ಅಮ್ಮ ಎಲ್ಲಿಡುತ್ತಾರೆಂದು ನೋಡಿ, ಕಪಾಟಿನ ಬಾಗಿಲೆಲ್ಲಾ ಭದ್ರವಾಗಿದೆಯೋ ಇಲ್ವೋ ನೋಡ್ಸಿದೆ. ಇಲ್ಲಾಂದ್ರೆ ನನ್ನ ಆಸ್ತೀನ ಯಾರಾದ್ರೂ ತಗೊಂಡ್ರೆ ಅಂತ ಭಯ! ಜೊತೆಗೆ ಅದೊಂಥರಾ ಅದುವಿಡಲಾರದಂಥ ಭಾವನೆ.

ಮಧ್ಯಾಹ್ನ ಮತ್ತೆ, ದುಡ್ಡು ತೋರ್‍ಸು ಅಂತ ಕೇಳಿದೆ, ಏನೋ ಕೆಲಸದಲ್ಲಿ ವ್ಯಸ್ತವಾಗಿದ್ದ ಅಮ್ಮ, ಸಮಯ ಮಾಡಿಕೊಂಡು ಬರೋವರೆಗೂ ನಾನು ಬೆಕ್ಕಿನ ಹಾಗೆ ಕಪಾಟಿನ ಸುತ್ತಮುತ್ತವೇ ಸುತ್ತುತ್ತಾ ಇದ್ದೆ. ದುಡ್ಡು ಹೊರ ತೆಗೆಸಿ, ಮುಟ್ಟಿ, ಮೂಸಿ ನೋಡಿ, ಮುಖವನ್ನು ಉರಿಯುವ ಬಲ್ಬಿನಂತೆ ಮಾಡಿಕೊಂಡು, ಅಮ್ಮನ ಕೈಗೆ ಕೊಟ್ಟೆ. ಅದಾಗಲೇ ಅಮ್ಮಂಗೆ ಅನುಮಾನ ಬಂದಿತ್ತು, ಇನ್ನು ಇವ್ಳ ಕಾಟ ತಪ್ಪಿದ್ದಲ್ಲ ಅಂತ, ‘ಆಯ್ತಲ್ಲಾ ನೋಡಿ, ಇನ್ನು ಮತ್ತೆ ಮತ್ತೆ ಕೇಳೋ ಹಾಗಿಲ್ಲ, ನಂಗೆ ಕೆಲ್ಸ ಇದೆ’ ಅಂತ ಮುಂಜಾಗ್ರತೆಯಾಗಿ ಸೂಚಿಸಿ ಹೋದ್ರು.

ಶಾಲೆಯಲ್ಲಿ, ನನ್ನ ತರಗತಿಯಲ್ಲಿ ನನಗೆ ವಿಶೇಷ ಗೌರವ. ಉಳಿದ ಮಕ್ಕಳಿಗೆ, ‘ನಮಗೂ ದುಡ್ಡು ಬರಬಾರದಿತ್ತಾ’ ಅನ್ನೋ ಸಂಕಟ. ಆಟ ಆಡಲು ಹೋದಾಗಲೂ ನಂಗದೇನೋ ಹೆಮ್ಮೆ. ಮುಂದೆರಡು ಮೂರು ದಿನ, ನನ್ನದೇ ವಯಸ್ಸಿನ ಎಲ್ಲರಿಗೂ ನನ್ನ ನೋಟಿನ ಬಗ್ಗೆ ವಿವರಗಳನ್ನು ಕೊಡೋದೇ ಆಯ್ತು. ಜೊತೆಗೆ, ನಂಗೂ ಏನೋ ಒಂದು ಧೈರ್ಯ, ಬಹುಶಃ ‘ಕಾಪಿ’ ಬರೀದೇ ಇದ್ರೂ ಸರಸ್ವತಿ ಟೀಚರಿಗೆ ಕೋಪ ಬರಲಾರದು, ನಂಗೆ ಬಹುಮಾನ, ಅದೂ ದುಡ್ಡು ಬಂದಿದ್ಯಲ್ಲಾ !!

ಕೊನೆಗೊಂದು ದಿನ ಶಾಲೆಯ ವಾರ್ಷಿಕೋತ್ಸವ ಬಂತು. ರಾತ್ರೆ ನಮಗೆಲ್ಲಾ ಜೊತೆಯಾಗಿ ಅಜ್ಜಿಯೂ ಬಂದ್ರು. ಮಕ್ಕಳ ಕೈಯಲ್ಲಿ ದುಡ್ಡು ಕೊಟ್ಟರೆ ಎಲ್ಲಿ ಕಳೆದುಕೊಳ್ಳುತ್ತಾರೋ ಅಂತ ಅಜ್ಜಿಯೇ ನಮಗೆ ಖಜಾಂಚಿ. ಹೊರಡುವ ಸಮಯದಲ್ಲಿ ಮತ್ತೆ ಮತ್ತೆ ಕೇಳಿ ದೃಢ ಪಡಿಸಿಕೊಳ್ಳುತ್ತಿದ್ದೆ, "ಅಜ್ಜೀ, ಎನ್ನ ಎರಡು ರೂಪಾಯಿ ತೆಕ್ಕೊಂಡಿದಿರನ್ನೇ, ಮರೆಯೆಡಿ" (ಅಜ್ಜೀ ನನ್ನ ಎರಡು ರೂಪಾಯಿ ತಗೊಂಡಿದೀರಾ ತಾನೇ ! ಮರೀಬೇಡಿ!)

ಅದ್ಯಾಕೋ ಏನೋ, ನನ್ನ ಈ ಸಂಭ್ರಮವನ್ನು ಯಾರು ಎಷ್ಟು ತಮಾಷೆ ಮಾಡಿದ್ರೂ ನಂಗೇನೂ ಅನಿಸ್ತಿರ್‍ಲಿಲ್ಲ. ನನ್ನ ಬಗ್ಗೆ ನಂಗೇ ‘ಸೆಲೆಬ್ರಿಟಿ’ ಥರಾ ಅನಿಸ್ತಿತ್ತು. (ತರಗತಿಯ ಮಕ್ಕಳ ದೃಷ್ಟಿಯಲ್ಲಿ ನಾನಾಗಲೇ ‘ಸೆಲೆಬ್ರಿಟಿ’ ಆಗಿದ್ದೆ, ಯಾರಿಗೆ ಏನೇ ಬೇಕಾದರೂ ನನ್ನ ಕೇಳೇ ಮಾಡೋವರೆಗೆ ಬಂದಿತ್ತು.)

ಶಾಲೆಯ ಹತ್ತಿರ ಬಂದಾಗ ಮೈಕಾಸುರನ ಅಬ್ಬರ, ವಾರ್ಷಿಕೋತ್ಸವದ ಸಡಗರ. ಒಂದು ರೌಂಡ್ ಹೋಗಿ, ಏನೇನು ಅಂಗಡಿ ಹಾಕಿದಾರೆ, ಏನೇನೆಲ್ಲ ತಗೊಳ್ಬೋದು ಅಂತೆಲ್ಲಾ ಲೆಕ್ಕ ಹಾಕಿಕೊಂಡೆ. ಅಣ್ಣಂಗೂ; ಏನು ಬೇಕಾದ್ರೂ ತಗೋ ಅಂತ ಧಾರಾಳವಾಗಿ ಹೇಳಿದೆ. ಕಾರ್ಯಕ್ರಮ ಶುರುವಾಯ್ತು. ಅಷ್ಟರಲ್ಲಿ ಐಸ್ ಕ್ಯಾಂಡಿ ಗಾಡಿಯ ಘಂಟೆಯೂ ಕೇಳಿತು. ಕೂಡಲೇ ಗೆಳತಿಯರನ್ನೆಲ್ಲಾ ಕರೆದುಕೊಂಡು, ಅಜ್ಜಿಯ ಹತ್ತಿರ ದುಡ್ಡು ಕೇಳಿದೆ. ಯಾರೋ ಇನ್ನೊಬ್ಬ ಅಜ್ಜಿಯೊಡನೆ ರಸವತ್ತಾದ ಪಟ್ಟಾಂಗದಲ್ಲಿದ್ದ ಕಾರಣ, ನನ್ನ ಎರಡು ರೂಪಾಯಿ ನೋಟನ್ನು ಹುಡುಕಿ ತೆಗೆಯುವ ಬದಲು, ಕೈಗೊಂದಿಷ್ಟು ನಾಣ್ಯಗಳನ್ನು ಕೊಟ್ಟು ಸಾಗಹಾಕಿದ್ರು. (ಇದರಿಂದಾಗಿ ಮುಂದೆ ಬರುವ ಕಷ್ಟದ ಅರಿವಾಗಲಿಲ್ಲ ಅವರಿಗೆ).

ಸಾಹುಕಾರಳಂತೆ ಕೈಲಿ ನಾಣ್ಯಗಳನ್ನು ಹಿಡಿದು, ಯಾರಿಗೆಲ್ಲ ಬೇಕೋ ತಗೊಳ್ಳಿ ಅಂತ ಹೇಳಿ, ನಾನೂ ಕೆಂಪು ಬಣ್ಣದ ಐಸ್ ಕ್ಯಾಂಡಿ ಚೀಪುತ್ತಾ, ಬಂದು ಅಜ್ಜಿಯ ಹತ್ರ ಕುಳಿತೆ. ಸಭೆ ಮುಗಿದು ಬಹುಮಾನ ವಿತರಣೆ ಆದ ಕೂಡಲೆ, ಚುರುಮುರಿ ಗಾಡಿ ನೆನಪಿಗೆ ಬಂತು. ಮತ್ತೆ ಅಜ್ಜಿ ಹತ್ರ ದುಡ್ಡು ಕೇಳಿದೆ. ಪಾಪ, ಮತ್ತೆ ನನ್ನ ನೋಟು ಕೊಡೋ ಬದ್ಲು, ಒಂದಷ್ಟು ನಾಣ್ಯಗಳನ್ನೇ ಕೊಟ್ರು. ಹೀಗೇ ನಾನು ಕೇಳೋದೂ, ಅಜ್ಜಿ ನಾಣ್ಯಗಳನ್ನೇ ಕೊಡೋದೂ ನಡೀತಾ ಇತ್ತು.

ಹಾಡುಗಳು, ನಾಟ್ಯಗಳು ಶುರುವಾಯ್ತು. ಈಗ ಹೋಗಿ ಕಡ್ಲೆ ಮಿಠಾಯಿ ತಿನ್ನದೇ ಇದ್ರೆ ಹೇಗೆ ! ಸರಿ, ರಾಗ ಎಳೆದೆ, ‘ಅಜ್ಜೀ, ಪೈಸೇ.....' ಎಲ್ಲರ ಕೈತುಂಬ ಕಡ್ಲೆ ಮಿಠಾಯಿ, ಬಣ್ಣಬಣ್ಣದ ಮಿಠಾಯಿ, ನನ್ನ ತಲೆ ತುಂಬಾ ಅಹಂಕಾರ, ನಾನು ಎಲ್ಲರಿಗೂ ಮಿಠಾಯಿ ಕೊಡ್ಸಿದೆ ಅಂತ. ಮಿಠಾಯಿ ತಿನ್ನುತ್ತಾ ಡ್ಯಾನ್ಸ್ ನೋಡೋ ಮಜಾನೇ ಬೇರೆ.

ಇದೆಲ್ಲಾ ಮುಗಿದು ಮಕ್ಕಳ ನಾಟಕ ಶುರುವಾಗುವ ಹೊತ್ತಿಗೆ ಬನ್ಸ್ ತಿನ್ನೋ ಮೂಡ್ ಬಂದು, ಅಲ್ಲಿ ಕೂರೋದೇ ಕಷ್ಟ ಆಯ್ತು. ‘ಅಜ್ಜೀ, ಬನ್ಸಿಂಗೆ ಪೈಸೆ ಕೊಡಿ’ ಅಂತ ಹಕ್ಕಿನಿಂದ ಕೇಳಿದೆ. ಇಷ್ಟರಲ್ಲಾಗಲೇ ಅಜ್ಜಿಯಂದಿರ ಮಾತಿಗೆ ಸ್ವಲ್ಪ ವಿರಾಮ ಉಂಟಾದುದರಿಂದ, ಈಗಾಗಲೇ ಸುಮಾರು ನಾಣ್ಯಗಳು ಕೈತಪ್ಪಿ ಹೋಗಿರುವ ಅರಿವಾದ ಅಜ್ಜಿ, ‘ಸಾಕಿನ್ನು, ಕಾಟಂಕೋಟಿ ತಿಂದದು’ (ಸಾಕಿನ್ನು ಹಾಳೂಮೂಳೂ ತಿಂದಿದ್ದು) ಅಂತ ಹೇಳಿದ್ದೇ ದೊಡ್ಡ ತಪ್ಪಾಗಿ ಕಂಡಿತು ನಂಗೆ. ‘ನಿಂಗೊಗೆ ಕೊಡ್ಲೆಂತ, ಎನ್ನ ಎರಡು ರೂಪಾಯಿ ಇಲ್ಯಾ!? (ನಿಮ್ಗೆ ಕೋಡೋಕೇನು, ನನ್ನ ದುಡ್ಡೇ ಇಲ್ವಾ) ಅಂತ ಜೋರಿನಿಂದಲೇ ಕೇಳಿದೆ, ನನ್ನ ಎರಡು ರೂಪಾಯಿಯನ್ನು ಅಜ್ಜಿಯೇ ಲಪಟಾಯಿಸುತ್ತಿದ್ದಾರೇನೋ ಅನ್ನುವ ಅನುಮಾನ ನಂಗೆ.

ಮೊದಲೇ ಆ ಎರಡು ರೂಪಾಯಿಯ ನೋಟನ್ನೇ ಕೊಡದೇ ಇದ್ದ ‘ದೊಡ್ಡ’ ತಪ್ಪಿನ ಅರಿವಾಯ್ತು ಅಜ್ಜಿಗೆ. ಅಷ್ಟರಲ್ಲಾಗಲೇ ಸುಮಾರು ಹತ್ತು ರೂಪಾಯಿ ಅಜ್ಜಿಯ ಕೈಬಿಟ್ಟಿತ್ತು. ಅದನ್ನು ನನಗೆ ತಿಳಿಸಿ ಹೇಳಲು, ಪಾಪ ತುಂಬಾ ಪ್ರಯತ್ನ ಪಟ್ರು. ಉಹೂಂ, ನಾನೋ ಮಹಾಜ್ಞಾನಿ ! ನನ್ನ ನೋಟು ನನ್ನ ಕೈಗೆ ಬಂದಿಲ್ಲ ಹಾಗಾಗಿ ಅದು ಖರ್ಚೇ ಆಗಿಲ್ಲ, ಈಗ ಅದನ್ನು ಕೊಡಿ ನಂಗೀಗ ಬನ್ಸ್ ಬೇಕೇ ಬೇಕು, ನಾನೇನು ನಿಮ್ಮ ದುಡ್ಡು ಕೇಳ್ತಿದೀನಾ, ಅಂತ ನನ್ನ ತರ್ಕ. ಕೊನೆಗೆ ‘ನನ್ನ ದುಡ್ಡು’ ಇಟ್ಟುಕೊಂಡ ತಪ್ಪಿಗೆ, ಮೊದಲು ಅದನ್ನೇ ನನ್ನ ಕೈಗೆ ಕೊಡದ ತಪ್ಪಿಗೆ, ಅಜ್ಜಿ ಪಾಪ, ತನ್ನ ಹತ್ತು ರೂಪಾಯಿ ಜೊತೆಗೆ, ಇನ್ನೆರಡು ರೂಪಾಯಿ ಕೊಡಬೇಕಾಗಿ ಬಂತು. ನಂಗೆ ‘ನನ್ನ ದುಡ್ಡಲ್ಲೇ’ ಬನ್ಸೂ ಸಿಕ್ತು.

ಬನ್ಸ್ ತಿಂದು, ನಾಟಕ ಶುರುವಾಗುವ ಹೊತ್ತಿಗೆ, ಏನೋ ಸಾಧಿಸಿ ಬಂದಂಥ ನೆಮ್ಮದಿಯಿಂದ ಅಜ್ಜಿಯ ತೊಡೆ ಮೇಲೆ ತಲೆ ಇಟ್ಟುಕೊಂಡು ನಿದ್ದೆ ಮಾಡಿದೆ. ಬೆಳಗಿನ ಜಾವ ಯಕ್ಷಗಾನ ಮುಗಿದು ಮಂಗಳ ಹಾಡುವಾಗ ಎಚ್ಚರವಾಗಿ, ಎಲ್ಲರ ಜೊತೆ, ಕಾಲೆಳೆದುಕೊಂಡು ಮನೆಗೆ ಹೊರಟೆ. ಈಗ ಎರಡು ರೂಪಾಯಿ ಖಾಲಿಯಾದುದರಿಂದ, ನಾನೂ ಎಲ್ಲರಂತೆ ಸಾಧಾರಣ ಮನುಷ್ಯಳು ಅನ್ನುವುದು ನಿಧಾನವಾಗಿ ಅರಿವಿಗೆ ಬಂತು.

ಇದಾಗಿ ಕೆಲವೇ ದಿನಗಳಲ್ಲಿ ಅಜ್ಜನ ತಿಥಿಗೆ (ಶ್ರಾದ್ಢ) ಊರಿಗೆ ಬಂದ ಚಿಕ್ಕಪ್ಪ ನನ್ನನ್ನು ಕರೆದು ಗುಟ್ಟಿನಲ್ಲಿ "ಇನ್ನೂ ಐದು ರೂಪಾಯಿ ಬತ್ತು ನಿನಗೆ" ಅಂತ ಹೇಳಿದ್ದನ್ನು ನಾನಿನ್ನೂ ಮರೆತಿಲ್ಲ :D

Thursday, July 30, 2009

ಬದುಕು

ಒಂದು ಹಾವಿನ ಸ್ನೇಹ ಮಾಡಿದೆ,
ಸಮಯವಲ್ಲದ ಸಮಯದಲ್ಲಿ ನನಗದು ಕಚ್ಚಿತು
ಈಗ ಮತ್ತೆ ಮನೆಯ ಸುತ್ತಮುತ್ತ ಹರಿದಾಡುತ್ತಿದೆ.

ಒಂದು ಬೆಕ್ಕಿನ ಸ್ನೇಹ ಮಾಡಿದೆ,
ಬೇಸರ ಬಂದಾಗ ಎದ್ದು ಹೋಯಿತು
ಈಗ ಮತ್ತೆ ಮನೆಯ ಕಿಟಕಿಯಲ್ಲಿ ಮಿಯಾವ್ ಅನ್ನುತ್ತಿದೆ.

ಒಂದು ಹಸುವಿನ ಸ್ನೇಹ ಮಾಡಿದೆ
ಒಮ್ಮೆ ಪ್ರೀತಿಯಿಂದ ತಡವಿದಾಗ ತಿವಿಯಿತು
ಈಗ ಮತ್ತೆ ಮನೆಯ ಮುಂದೆ ಬಂದು ಅಂಬಾ ಎನ್ನುತ್ತಿದೆ

ಒಂದು ಗೋಸುಂಬೆಯ ಸ್ನೇಹ ಮಾಡಿದೆ
ಒಂದು ದಿನ, ಮಾತಾಡುತ್ತಿದ್ದಂತೆ ಬಣ್ಣ ಬದಲಿಸಿತು
ಈಗ ಮತ್ತೆ ಮನೆಯೆದುರಿನ ಮರದಲ್ಲಿ ಅದೇ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಿದೆ

ನಾನೂ ಮತ್ತೆ ಮಾತಾಡುತ್ತಿದ್ದೇನೆ, ಪ್ರೀತಿ ತೋರುತ್ತಿದ್ದೇನೆ
ಸ್ನೇಹ ಹಸ್ತ ತೆರೆದೇ ಇದ್ದೇನೆ, ಬದುಕುದ್ದಕ್ಕೂ ಹೀಗೇ ಇರುತ್ತೇನೆ,
ಯಾಕೆಂದರೆ ದ್ವೇಷ ನಿಮಿಷ, ಪ್ರೀತಿ ಹರುಷ, ಸ್ನೇಹ ವರುಷ

Sunday, March 22, 2009

ಅಣ್ಣ - ತಂಗಿ















ಪುಟ್ಟ ತಂಗಿ, ಒಬ್ಬ ಪುಟ್ಟ ಅಣ್ಣ

ಮನೆಯಲ್ಲಿ ಮರದ ಕೆಲಸ (ಕಾರ್ಪೆಂಟರಿ) ನಡೆಯುತ್ತಿದೆ.
ಆಟವಾಡುತ್ತಾ, ಆಡುತ್ತಾ, ಕೈಗೆತ್ತಿಕೊಂಡ ‘ಮರಳು ಕಾಗದ’ (ಸಾಂಡ್ ಪೇಪರ್) ನೋಡಿ, ಏನನ್ನಿಸಿತೋ,
ಬಗ್ಗಿ ಏನನ್ನೋ ಹೆಕ್ಕುತ್ತಿದ್ದ ಪುಟ್ಟ ತಂಗಿಯ ಬೆತ್ತಲೆ ಬೆನ್ನಿನ ಮೇಲೆ ಒರೆದ.
ತಂಗಿಯ ಅಳು ತಾರಕಕ್ಕೇರಿದಾಗ ಬಂದ ಅಪ್ಪ, ವಿಷಯ ತಿಳಿದು, ರಕ್ತ ಬರುತ್ತಿರುವ ಬೆನ್ನನ್ನು ನೋಡಿ,
ತಾನು ತಂಗಿಗೆ ಮಾಡಿರುವುದೇನೆಂದು ತಿಳಿಯಲು ಹುಡುಗನ ಪುಟ್ಟ ಕೈಗೆ ಮೆತ್ತಗೆ ‘ಮರಳು ಕಾಗದ’ ಉಜ್ಜಿ,
ಆ ತಪ್ಪಿಗೆ ಹಾಗೂ ಮಗನ ನೋವಿಗೆ, ಮನದಲ್ಲಿ ದುಗುಡ ತುಂಬಿಕೊಂಡು ತನ್ನ ಕೈಗೂ ಗಸಗಸ ತಿಕ್ಕಿಕೊಂಡ.
ಇಷ್ಟರಲ್ಲೇ ಅಲ್ಲಿಗೆ ಬಂದ ಅಮ್ಮ ಎಲ್ಲವನ್ನೂ ನೋಡಿ, ಕಣ್ಣಲ್ಲಿ ನೀರು ತುಂಬಿಕೊಂಡು, ಜೇನು ತಂದು ಮೂವರಿಗೂ ಹಚ್ಚುತ್ತಾಳೆ.

ಈಗ ಮತ್ತೆ ಪುಟ್ಟ ಹುಡುಗಿಯ ಕಣ್ಣಲ್ಲಿ ನೀರು, ಬಾಯಲ್ಲಿ ವಾಲಗ.

ಕೈಗೆ ಹಚ್ಚಿದ ಜೇನನ್ನು ಅಣ್ಣ ನೆಕ್ಕುತ್ತಿದ್ದಾನೆ, ನನಗೆ ಬೆನ್ನಿಗೆ ಹಚ್ಚಿದೀರಲ್ಲಾ, ನಾನು ಹೇಗೆ ನೆಕ್ಕಲಿ ?! ವಾss..... !

Sunday, March 30, 2008

ಬದುಕು ಸುಂದರವಾಗಿದೆ - I



೦೧.
ಮಳೆ ಬಂದು ರಸ್ತೆಯ ಒಂದು ಬದಿಯಲ್ಲಿ ನೀರು ನಿಂತಿದೆ.
ಇನ್ನೊಂದೆಡೆ ವಾಹನಗಳು ಭರದಿಂದ ಓಡಾಡುತ್ತಿವೆ.
ಮಧ್ಯವಯಸ್ಕ ಸೈಕಲ್ ಸವಾರನೊಬ್ಬ, ನಿಂತಿರುವ ನೀರಿನ ಮೇಲೆ ತಿರುತಿರುಗಿ ಸೈಕಲ್ ಓಡಿಸುತ್ತಾ, ನೀರು ಚಿಮ್ಮಿಸುತ್ತಾ ಸಂತೋಷ ಪಡುತ್ತಿದ್ದಾನೆ.

೦೨.
ನೂಕುನುಗ್ಗಲಿನ ನಡುವೆ, ಪುಟ್ಟ ಮಗುವನ್ನು ಸೊಂಟದ ಮೇಲೇರಿಸಿಕೊಂಡಿರುವ ಮಹಿಳೆ, ಪ್ರಯಾಸದಿಂದ ಬಸ್ ಹತ್ತಿ, ಯಾರೋ ಬಿಟ್ಟು ಕೊಟ್ಟ ಸ್ಥಳದಲ್ಲಿ ಕುಳಿತಳು. ಮಗುವಂತೂ ಕಳವಳ, ಆತಂಕದಿಂದ, ಬೆದರಿ, ಚಿಗರೆಯಾಗಿತ್ತು. ಬಸ್ ಹೊರಟಾಗ ಗಾಬರಿ, ಅಸಹಾಯದಿಂದ ಚೀರಿತು "ಅಪ್ಪಾ........!!"
ಕಂದನ ಕರೆ ಕೇಳಿಸಿಕೊಂಡ ಅಪ್ಪ, ಜನರ ಮಧ್ಯೆ ಜಾಗ ಮಾಡಿಕೊಂಡು ಮುಂದೆ ಬಂದು ಮಗುವಿಗೆ ತನ್ನ ಮುಖ ತೋರಿಸಿದ.
ಅಪ್ಪನ ಮುಖ ಕಂಡ ಕೂಡಲೇ ನೆಮ್ಮದಿ, ಸಂತೋಷದಿಂದ ಮಗು ಮತ್ತೆ ಚೀರಿತು, "ಅ.........ಪ್ಪಾ !!

Friday, March 07, 2008

ಭಾವಗತಿ

ಕನಸು ಕಾಣುವೆನೆಂದರೂ 
ಕಣ್ಣುಗಳು ಮುಚ್ಚುತ್ತಿಲ್ಲ

ಮಲಗಿ ಮರೆಯೋಣವೆಂದರೂ 
ಮನದ ಪುಟಗಳು ಬಿಡುತ್ತಿಲ್ಲ

ಯಾಕಿಂಥಾ ನಿರಾಸೆ, ಭ್ರಮನಿರಸನ ! 
ಇರದಿರುವುದರ ಬಯಸಿ ಇರುವುದರ ಅವಸಾನ !

ಬದುಕು ಬಣ್ಣದ ಚಿತ್ತಾರ ನಿಜ, 
ಕಪ್ಪು ಬಣ್ಣದೊತ್ತು ಹೆಚ್ಚಾದರೆ ಉಳಿದುದಕ್ಕೆಲ್ಲಾ ರಜ

ಉದಿಸಿದರೆ ಕತ್ತಲೆಯ ಕದದಲ್ಲೊಂದು ಪ್ರಣತಿ,
ತುಂಬುವುದು ಜೀವಕೊಂದು ಭಾವಗತಿ

kanasu kANuveneMdarU kaNNugaLu muccuttilla
malagi mareyONaveMdarU manada puTagaLu biDuttilla
yAkiMthA nirAse, Bramanirasana ! iradira bayasi iruvudara avasAna !

baduku baNNada cittAra nija, kappu baNNadottu heccAdare uLidudakkellA raja
udisidare kattaleya kadadalloMdu praNati, tuMbuvudu jIvakoMdu BAvagati

ಆಸೆ

ಹೆಚ್ಚು ಓದಿಲ್ಲವಾದರೂ ಬರೆಯುವಾಸೆ
ಹೊಟ್ಟೆಯೊಳಗಿನ ಬೆಂಕಿ ಹೊರಹಾಕುವಾಸೆ
ಲಂಚಕೋರರ ಸಂಚ ಬಯಲಿಗೆಳೆಯುವಾಸೆ
ಬಡಪಾಯಿಗಳ ಬೆನ್ನೆಲುಬಾಗುವಾಸೆ
ರಕ್ಷಕಳಾಗಿ ರಕ್ಷೆ ನೀಡುವಾಸೆ
ರಸ್ತೆಗಿಳಿದ ರಗಳೆಗಳ ಗುಡಿಸುವಾಸೆ
ದುಷ್ಟತನವ ಬಿಡಿಸಿ ತೊಳೆಯುವಾಸೆ
ದೃಷ್ಟಿಹೀನರಿಗೊಂದು ದೀಪವಾಗುವಾಸೆ
ಮಾತೆಯಿಲ್ಲದ ಮಗುವಿಗೊಂದು ಮಮತೆಯಾಗುವಾಸೆ
ಆ ಮಗುವಿನೊಂದಿಗೆ ನಾನೂ ಒಂದು ಮಗುವಾಗುವಾಸೆ


heccu OdillavAdarU bareyuvAse
hoTTeyoLagina beMki hora hAkuvAse
laMcakOrara saMca bayaligeLeyuvAse
baDapAyigaLa bennelubAguvAse
rakShakaLAgi rakShe nIDuvAse
rastegiLida ragaLegaLa guDisuvAse
duShTatanava biDisi toLeyuvAse
dRuShTihInarigoMdu dIpavAguvAse
mAteyallada maguvige mamateyAguvAse
A maguvinoDane nAnU oMdu maguvAguvAse.

ಪದ್ಯಗಳು

ಪದ್ಯಗಳು ಹುಟ್ಟುವುದೇ ಹೀಗೋ, 
ಪದ್ಯಕ್ಕೆ ಪದಗಳು ದೊರೆಯುವುದು ಹೀಗೋ

ನಡುರಾತ್ರೆಯಾದರೂ ನಿದ್ದೆಬಾರದೆ, 
ತಾರಸಿಯ ತೊಲೆಗಳನ್ನೆಣಿಸುತ್ತಿದ್ದಾಗ,
ಮಟಮಟ ಮಧ್ಯಾಹ್ನ 
ಮಧ್ಯರಸ್ತೆಯಲ್ಲಿ ಮೈಮರೆತು ನಿಂತಾಗ !

ಮುಗ್ಧ ಮಗುವೊಂದು 
ಭಯಗೊಂಡು ಬೆವೆತಾಗ,
ದುರುಳರ ದೃಷ್ಟಿಗೆ ಬಿದ್ದ ಯುವತಿ 
ಅಸಹಾಯಳಾದಾಗ

ಪದ್ಯಗಳು ಹುಟ್ಟುವುದೇ ಹೀಗೋ, 
ಅಥವಾ ಪದ್ಯಕ್ಕೆ ಪದಗಳು ದೊರೆಯುವುದು ಹೀಗೋ

padyagaLu huTTuvudE hIgO, padyakke padagaLu doreyuvudu hIgO
naDu rAtreyAdarU nidde bArade, tArasiya tolegaLaneNisuttiddAga,
maTamaTa madhyAhna madhyarasteyalli maimaretu niMtAga.
mugdha maguvoMdu BayagoMDu bevetAga,
duruLara dRuShTige biddayuvati asahAyaLAdAga.
padya huTTuvudE hIgO, athavA padyakke padagaLu doreyuvudu hIgO

Tuesday, May 08, 2007

ಪ್ರಕೃತಿ ಚಿಕಿತ್ಸೆ

ಎರಡು ತಿಂಗಳು ! ಹೇಗೆ ಕಳೆದೆ ಅಂತ ನೆನ್‍ಸ್ಕೊಂಡ್ರೆ...., ಅಬ್ಬಾ ನಿಮಾನ್ಸ್‍ಗೆ ಅಡ್ಮಿಟ್ ಆಗಿದ್ದಿದ್ರೂ ನಂಗೆ ಹೀಗನ್ನಿಸ್ತಿರ್‍ಲಿಲ್ಲ ಅನ್ಸುತ್ತೆ. ಫೆಬ್ರವರಿಯಲ್ಲಿ ದೇವಕಾರಿಗೆ ಹೋಗಿದ್ದೇ ಕೊನೆ, ಮತ್ತೆಲ್ಲಿಗೂ ಹೋಗಿರಲಿಲ್ಲ. ಎರಡು ತಿಂಗಳು ಅಬ್ಬಾ!!!! ತಮಾಷೇನಾ....!!!

ಹೇಗಿದ್ರೂ ಮೇ ೫ ಕ್ಕೆ ರಜಾ ಹಾಕಿದೀನಿ, ರಜಾ ಹಾಕಿದ ಮೂಲ ಕಾರಣ ಬೇರೆ ಆದ್ರೂ ಆ ಕೆಲಸವಾಗುವ ಸಾಧ್ಯತೆ ಇಲ್ಲವಾದ್ರಿಂದ ಮನಸ್ಸು ಮಂಡಿಗೆ ತಿನ್ನಲು ಸುರು ಮಾಡಿದ ಸಮಯಕ್ಕೇ ಡೀನ್ ಫೋನ್ ಮಾಡಿ, `ನಾಡಿದ್ದು ಕೋಟೆಬೆಟ್ಟಕ್ಕೆ ಹೋಗೋಣ್ವಾ, ಶ್ರೀಕಾಂತ್ ಕೂಡಾ ಕೇಳ್ದ' ಅಂದಾಗ, ಗರಿಗೆದರಿದ ಆಸೆ ಕೂಡಲೇ ಅರುಣಂಗೆ ಫೋನ್ ಮಾಡಿಸ್ತು. `ರೈಟ್ ಹೋಗೋಣ, ಭಾಳಾ ದಿನ ಆಯ್ತಲ್ವಾ ಎಲ್ಲೂ ಹೋಗ್ದೇ....ಅರುಣನ ಉತ್ತರ...!' (ಹಿಂದಿನ ವಾರವಷ್ಟೇ ಅವ್ರೆಲ್ಲಾ ಎಲ್ಲೋ ಹೋಗಿದ್ರೂ...). ಆಹಾ, ಅದಕ್ಕೇ ಹೇಳೋದು ನಾನು ಮನುಷ್ಯ ಯಾವಾಗ್ಲೂ ಪಾಸಿಟಿವ್ ಆಗಿ ಯೋಚ್ನೆ ಮಾಡ್ಬೇಕು ಅಂತ. ಎರಡ್ಮೂರು ದಿವ್ಸ ಆದ್ಮೇಲೆ ಗೋವಿಂದರಾಜ್ ಬರೋದು ಕೂಡ ಕನ್‍ಫ‍ರ್ಮ್ಡ್!!! ಒಂದು ಸಣ್ಣ ನೋವು - ಶ್ರೀನಿಧಿ ಹಾಗೂ ಸುಬ್ಬಿಯ ಗೈರು ಹಾಜರಿ.

ಇಲ್ಲಿಂದ ಮಡಿಕೇರಿಗೆ ಹೋಗಿ, ಅಲ್ಲಿಂದ ಹೊರಟು ಹಟ್ಟಿನಹೊಳೆಯಲ್ಲಿಳಿದು ಚಾರಣ ಸುರು. ಎರಡು ತಿಂಗಳ `ಜನವಾಸ'ದಿಂದ ಇಷ್ಟವಾದ `ವನವಾಸ'ಕ್ಕೆ ನಾಂದಿಯಾಗಿ ಕೋಟೆಬೆಟ್ಟದತ್ತ ನಡೆಯಲಾರಂಭ. ಬಹಳ ದೂರದವರೆಗೆ, ದಾರಿಯುದ್ದಕ್ಕೂ ಜೊತೆ ನೀಡುವ ಹೆಸರಿಲ್ಲದ ಹೊಳೆ, ಮೈ ಉರಿವ ಬಿಸಿಲಿದ್ದರೂ ಕಣ್ಣಿಗೆ ತಂಪು ನೀಡುತ್ತಿತ್ತು. ಒಂದೆಡೆ, ನದಿ ದಾಟಲು ಊರವರು ನಿರ್ಮಿಸಿಕೊಂಡ ತೂಗು ಸೇತುವೆಯ ಮೇಲೆ ತೂಗಾಡಿ, ನಡೆದಾಡಿ, ಓಡಾಡಿ ಮತ್ತೆ ರಸ್ತೆಗೆ ಬಂದು ಮುಂದೆ ಹೋದ್ವಿ. ಉದ್ದಕ್ಕೂ ಏರುವ ರಸ್ತೆ, ಅಕ್ಕ ಪಕ್ಕ ಕಾಫೀ ತೋಟ, ದೊಡ್ಡ ದೊಡ್ಡ ಮರಗಳು, ಸುಂದರವಾದ ಹೂವುಗಳು, ಅಲ್ಲಲ್ಲಿ ಯೋಗಕ್ಷೇಮ ವಿಚಾರಿಸಲು ಹಸುಗಳು, ನಾಯಿಗಳು, ಎಲ್ಲೋ ಒಂದೊಂದು ಮನೆಗಳು.

`ನಂದ' ಅನ್ನೋ ಒಬ್ಬ ವ್ಯಕ್ತಿ ಸಿಕ್ಕಿದಾಗ ಗೋವಿಂದರಾಜ್ ತಡೆಯಲಾರ್‍ದೆ `ಹಲಸಿನ ಹಣ್ಣು ಸಿಗುತ್ತೇನಪ್ಪಾ' ಅಂದ್ರು. ಇಲ್ಲವೆಂದ ಆತ ಮತ್ತೆ, ನಿಮ್ಗೆ ತುಂಬಾ ಇಷ್ಟಾನ ಅಂತ ಕೇಳಿ, ಇದೆ ಬನ್ನಿ ಅಂತ ಕರೆದಾಗ ಅದೆಲ್ಲಿತ್ತೋ ಶಕ್ತಿ, ನಮ್ಮನ್ನೆಲ್ಲಾ ನಾಚಿಸುವಂತೆ, ಅತ್ಯುತ್ಸಾಹದ ಬುಗ್ಗೆಯಾದ ಗೋವಿಂದರಾಜ್ ಕೂಡಲೇ `ಬನ್ನಿ ಬನ್ನಿ' ಅಂತ ಡೀನ್, ಶ್ರೀಕಾಂತ್‍ ಜೊತೆ `ನಂದ'ನ ಹಿಂದೆ ಒಂದೇ ಓಟ. ಹಲಸಿನ ಕಾಯಿಯೊಂದಿಗೆ ಪುನಃ ಏರು ರಸ್ತೆ ಹತ್ತಿ ನಮ್ಮ ಬಳಿ ಬಂದು, ಡೀನ್ ಸಹಾಯದೊಂದಿಗೆ ಮಚ್ಚಿನಲ್ಲಿ ಹಲಸಿನಕಾಯಿಯನ್ನು ಕೊಚ್ಚಿ ನೋಡಿದಾಗ ಅದು ಹಲಸಿನಕಾಯಿಯೇ ಆಗಿತ್ತು, ಹಣ್ಣಾಗಿರಲಿಲ್ಲ. `ಗೋವಿ'ಗೆ ಸ್ವಲ್ಪ ನಿರಾಸೆಯಾದರೂ ಸಮಾಧಾನಪಟ್ಕೊಂಡ್ರು.

ಏರಿ, ಏರಿ, ಮೇಲೇರಿ ಹೋಗಿ ಒಂದು ತಿರುವಿನಿಂದ ನೋಡಿದಾಗ ದೂರದಲ್ಲಿ ಕಾಣಿಸಿತ್ತು ಕೋಟೆಬೆಟ್ಟ. `ದಕ್ಷಿಣದ ಕೈಲಾಸಪರ್ವತ'ದಂತೆ, ನಾವು ಹತ್ತಿಬಂದ ದಾರಿ ಸಾರ್ಥಕವೆನಿಸುವಂತೆ ನಿಂತಿತ್ತು. ಮತ್ತೊಂದು ಕಿಲೋಮೀಟರ್ ಮುಂದುವರಿದು ರಸ್ತೆ ಕೊನೆಗೊಂಡು, ಇನ್ನೇನು ಕಲ್ಲುಮುಳ್ಳುಗಳ ನಡುವೆ ಬೆಟ್ಟ ಏರ್‍ಬೇಕು...... ಅಷ್ಟರಲ್ಲಿ `ಕಾಳಮೇಘಗಳು ಬಾನಂಗಳದಲ್ಲಿ ಮೇಳೈಸಿ ಘರ್ಜಿಸಲಾರಂಭಿಸಿದ್ವು'.

ನಿಜ, ಆಗುವುದೆಲ್ಲಾ ಒಳ್ಳೆಯದಕ್ಕೇ ಅಂತ ತಿಳ್ಕೊಂಡ್ರೆ, ಆ ದೃಷ್ಟಿ ಇಟ್ಕೊಂಡ್ರೆ ಎಲ್ಲವೂ ಸುಗಮ. ಎರಡು ಬಂಡೆಕಲ್ಲುಗಳು ಎಷ್ಟು ಅನುಕೂಲವಾಗಿ ಅಕ್ಕಪಕ್ಕ ಇತ್ತಂದ್ರೆ, ನಮ್ಮಲ್ಲಿದ್ದ ದೊಡ್ಡ ಪ್ಲಾಸ್ಟಿಕ್ ಕವರನ್ನು ಅವುಗಳ ಮಧ್ಯೆ ಹಾಕಿ ನಮ್ಮ ರಕ್‍ಸ್ಯಾಕ್‍ಗಳನ್ನು ಅಲ್ಲಿ ತುಂಬಿಸಿ, ಮತ್ತೊಂದು ಕವರ್ ಮುಚ್ಚಿ, ನಾವೆಲ್ಲಾ ಸುತ್ತ ಕೂತಾಗ ಈ ಮಳೆ ಏನು, ಕುಂಭವರ್ಷವೇ ಆದರೂ ಏನೂ ಆಗಲಾರದಷ್ಟು ಸೇಫ್ ಆಗಿತ್ತು ಬ್ಯಾಗ್‍ಗಳು. ಮಳೆ ಸುಮಾರು ಅರ್ಧಘಂಟೆ ಸುರಿದು ನಿಂತ ಮೇಲೆ ಹೊಸ ಹುರುಪಿನೊಂದಿಗೆ ನಮ್ಮ ಪಯಣ ಮತ್ತೆ ಸುರು. ಪೂರ್ತಿ ಒದ್ದೆಯಾಗಿದ್ದರೂ, ಛಳಿಗಾಳಿ, ಮಂಜು ಮುತ್ತಿಕ್ಕಿ ಕಚಗುಳಿಯಿಟ್ಟರೂ ನಾವು ದಿಕ್ಕೆಡದ ಸಿಪಾಯಿಗಳಂತೆ ಮುಂದಡಿಯಿಟ್ವಿ.

ಎರಡು ಬಾರಿ ದಟ್ಟ ಮಂಜು ಮುಸುಕಿ ಮುಂದೆ ದಾರಿ ಕಾಣಿಸದೇ ನಿಲ್ಲಬೇಕಾಯಿತು. `ಮನಕೆ ಮುಸುಕಿದ ಮಂಜು ಸರಿದಾಗ ಸುತ್ತಲಿರುವ ಎಲ್ಲವೂ ಸುಂದರವಾಗಿರುವಂತೆ', ಪ್ರಕೃತಿಯ ಸೆರಗಿನ ಮಂಜು ಸರಿದಾಗ ಕಾಣಿಸಿದ ದೃಶ್ಯ ರಮಣೀಯ ಹಾಗೂ ಸ್ಮರಣೀಯವಾಗಿತ್ತು. ಕತ್ತಲಾಗುವ ಮೊದಲೇ ಬೆಟ್ಟದ ನೆತ್ತಿಯೇರಿದ ನಾವು, ಅಲ್ಲಿರುವ ಪುಟ್ಟ ಗುಡಿಯ (ಶಿವನ ಗುಡಿ) ಆವರಣದಲ್ಲಿ, ನಮ್ಮ ಡೇರೆ ಹಾಕಿ ಬೆನ್ನು ನೆಟ್ಟಗೆ ಮಾಡುವಷ್ಟರಲ್ಲಿ ಪೂರ್ತಿ ಕತ್ತಲಾಗಿ ಕೆಳಗೆ ಪಟ್ಟಣಗಳ ದೀಪಗಳೊಂದಿಗೆ ಮಂಜು ಕಣ್ಣಮುಚ್ಚಾಲೆಯಾಡುವಾಗ ತಂಗಾಳಿ ಬೀಸುತ್ತಿತ್ತು, ಲಘುವಾಗಿ ಮಳೆ ಹನಿಯುತ್ತಿತ್ತು.

ಗಿಡಗಳ ಮೇಲೆ ಮಿಂಚುಹುಳಗಳ ಮಂಚ ನೋಡುತ್ತಾ, ಬಾನಲ್ಲಿ ಮಿಂಚು ಗುಡುಗು ಸಿಡಿಲಿನ ಆರ್ಭಟ ಕೇಳುತ್ತಾ ಕೊನೆಗೆ ಒಂಭತ್ತು ಘಂಟೆಗೆ ಮಲ್ಕೊಂಡ್ವಿ. ದೇವರ ದಯೆಯೋ, ನಮ್ಮ ದುರಾದೃಷ್ಟವೋ ಮತ್ತೆ ಮಳೆ ಬರ್‍‍ಲಿಲ್ಲ. ಬೆಳಗಾಗುತ್ತಿದ್ದಂತೆ ಒಂದು ಹಕ್ಕಿ ನಮ್ಮ ಡೇರ್‍ಎ ಪಕ್ಕದಲ್ಲೇ ಕೂತ್ಕೊಂಡು `ಮುಗೀತಾ....' ನಿದ್ದೆ ಮುಗೀತಾ.....' ಅಂತ ಕೇಳ್ತಾ ಇತ್ತು. ಹೊರಗಡೆ ಬಂದು ನೋಡಿದ್ರೆ, ಸುತ್ತೆಲ್ಲಾ ಆ ಹಕ್ಕಿಗಳದೇ ಕಾರುಬಾರು. ಸೂರ್ಯನೂ ಮಂಕಾಗುವಂತೆ ಮುಸುಕಿದ ಮಂಜು, ಆ ಮಂಜಿನೊಡನೆ ಗುದ್ದಾಡುತ್ತಾ ಸೂರ್ಯ ಮೇಲೆ ಬಂದಂತೆ ಸುತ್ತೆಲ್ಲಾ ಅಗಾಧವಾದ ಕಡಲಂತೆ ಕಾಣುವ ನೋಟ. ಮತ್ತೆಮತ್ತೆ ನೋಡಿ ಕಣ್ಣ್‍ಮನ ತುಂಬಿಕೊಳ್ಳುತ್ತಾ ಪುನಃ `ಜನವಾಸ'ದಲ್ಲಿ ಬದುಕುವ ಶಕ್ತಿ ತುಂಬಿಕೊಂಡೆ ನಾನು.

ಹಿಂತಿರುಗಿ ಬರುವಾಗ, ಹೊಳೆಯಲ್ಲಿಳಿದು ನೀರಾಟವಾಡಿ, ಹಟ್ಟಿನಹೊಳೆಯ ಒಂದು ಹೊಟೇಲಲ್ಲಿ ಕಾಫೀ, ಟೀ, ಬನ್ ಮುಗಿಸುವಷ್ಟರಲ್ಲಿ ಬಸ್ ಬಂತು. ಮಡಿಕೇರಿಗೆ ಬಂದು ಊಟ ಮಾಡಿ ವಿಶ್ರಾಂತಿ ತಗೋತಾ ಇರೋವಾಗ ಮತ್ತೆ ಮಳೆ. `ಬೆನಕ'ನ ಜೊತೆ ಮಳೆಯಲ್ಲಿ ನೆನೆದು, ಆಟವಾಡಿ ಬಿಸಿನೀರಲ್ಲಿ ಸ್ನಾನ. ಅರುಣ ನಮ್ಮನ್ನು ಬಿಟ್ಟು ಮೈಸೂರಿಗೆ ಹೋದ ಕೂಡಲೇ ಕತ್ತಲಾಯ್ತು (ಸಂಜೆಯಾಯ್ತು). ನಂತರ ರಾಜಾಸೀಟ್‍ಗೆ ಹೋಗಿ ಮತ್ತೆ ಕೋಟೆಬೆಟ್ಟವನ್ನು ನೋಡುತ್ತಾ, ಆ ಅವಿಸ್ಮರಣೀಯ ಅನುಭವವನ್ನು ಮೆಲುಕು ಹಾಕಿ, `ಶಾಮಕ್ಕ' ಪ್ರೀತಿಯಿಂದುಣಿಸಿದ ಊಟ ಉಂಡು, ಎಲ್ಲರಿಗೂ ಟಾಟಾ... ಬಾಯ್ ಬಾಯ್ ಹೇಳಿ ಬೆಂಗಳೂರು ಬಸ್ ಹತ್ತಿದ್ವಿ.

ಆ! ಏನಂದ್ರೀ..... ಮತ್ತೆ ನಿಮ್ಹಾನ್ಸ್‍ಗೆ ಸೇರೋ ಐಡಿಯಾ ಇದ್ಯಾ ಅಂದ್ರಾ..... !! ಛೇ.. ಛೇ..... ನಿಮ್ಗ್ ಹಾಗನ್ಸುತ್ತಾ...!!! ಇಲ್ಲ ಅಲ್ವಾ..... ಯಾಕೇಂದ್ರೆ ನಾನು ಹೋಗಿದ್ದು `ಪ್ರಕೃತಿಚಿಕಿತ್ಸೆ'ಗೆ... ಬೇಕಿದ್ರೆ ನೀವೂ ಆಗಾಗ ಹೋಗ್ತಾ ಇರಿ......

Saturday, April 07, 2007

ಸಂಗಾತಿ



ನಿದ್ದೆ ಬರುತ್ತಿದ್ದರೆ ಹೇಳುತ್ತಾನೆ
ನಿನ್ನ ಬೆಕ್ಕುಮರಿಗೆ ನಿದ್ದೆ ಬರುತ್ತಿದೆ
ಈತನೇನಾದರೂ ಬೆಕ್ಕಾಗಿದ್ದರೆ
ನಾನು ಕುಳಿತಾಗ ಸೀರೆಯ ನೆರಿಗೆಯಲ್ಲಿ ಮುದುರಿ
ಹೊಟ್ಟೆ ಗುರುಗುಡಿಸುತ್ತಾ ನಿದ್ರಿಸುತ್ತಿದ್ದ
ಸದಾ ನನ್ನ ಮನಸು ಹೃದಯಕ್ಕಂಟಿಕೊಂಡಿರುವ ಈತ
ಬೆಕ್ಕೇ ಹೌದು

ಕಾಯುತ್ತಿರುವಾಗ ಹೇಳುತ್ತಾನೆ
ನಿನ್ನ ನಾಯಿಮರಿ ಹಾದಿ ನೋಡುತ್ತಿದೆ
ಈತನೇನಾದರೂ ನಾಯಿಯಾಗಿದ್ದರೆ
ಮುಖ ಕಂಡೊಡನೆ ಬಾಲವಾಡಿಸುತ್ತಾ
ನಗೆ ಕಂಡೊಡನೆ ನೆಗೆದು ಹರ್ಷಿಸುತ್ತಿದ್ದ
ಸದಾ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಈತ
ನಾಯಿಯೇ ಹೌದು

ಹೊಗಳಿದರೆ ನಾಚಿ ಹೇಳುತ್ತಾನೆ
ನಿನ್ನ ಗುಬ್ಬಿಮರಿ ಉಬ್ಬಿ ಹೋಗುತ್ತಿದೆ
ಈತನೇನಾದರೂ ಗುಬ್ಬಿಯಾಗಿದ್ದರೆ
ಹೆಕ್ಕಿ ಆರಿಸಿ ಶ್ರೇಷ್ಠವಾದುದನ್ನು ನನಗೇ ಕೊಡುತ್ತಿದ್ದ
ಸದಾ ನನಗೆ ಒಳ್ಳೆಯದೇ ಸಿಗಬೇಕೆಂದು ಹಾರೈಸುವ ಈತ
ಗುಬ್ಬಿಯೇ ಹೌದು

ನಾನು ಬಸವಳಿದರೆ ಕೇಳುತ್ತಾನೆ, ಸುಸ್ತಾಯ್ತಾ ಮಗಳೇ
ಹಸಿವೆಂದರೆ ಕೇಳುತ್ತಾನೆ, ಹಸಿವೇನೋ ಪುಟ್ಟಾ
ಹಾಗಾದರೆ, ಈತ ನನ್ನ ತಂದೆಯೇ, ಇಲ್ಲಾ ತಾಯಿಯೇ?
ಅಲ್ಲವೆಂದಾದರೆ ಯಾರೀತ ! ನೀವೇ ಹೇಳಿ ಯಾರೀತ !!

Sangaathi

nidde baruttiddare hELuttaane
ninna bekkumarige nidde baruttide
ItanEnaadaroo bekkaagiddare
naanu kuLitaaga sIreya nerigeyalli muduri
hoTTe guruguDisuttaa nidrisuttidda
sadaa nanna manasu hRudayakkaMTikoMDiruva Ita
bekkE haudu

kaayuttiruvaaga hELuttaane
ninna naayimari haadi nODuttide
ItanEnaadaroo naayiyaagiddare
muKa kaMDoDane baalavaaDisuttaa
nage kaMDoDane negedu harShisuttidda
sadaa nannannu kaNNalli kaNNiTTu kaayuva Ita
naayiyE haudu


hogaLidare naaci hELuttaane
ninna gubbimari ubbi hOguttide
ItanEnaadaroo gubbiyaagiddare
hekki aarisi shrEShThavaadudannu nanagE koDuttidda
sadaa nanage oLLeyadE sigabEkeMdu haaraisuva Ita
gubbiyE haudu

naanu basavaLidare kELuttaane, sustaaytaa magaLE...
hasiveMdare kELuttaane, hasivEnO puTTA
haagaadare, Ita nanna taMdeyE, illaa taayiyE?
allaveMdaadare yaarIta ! nIvE hELi yaarIta !!

ನಿರೀಕ್ಷೆ



ಕಾವೇರಿ ಭವನದ ಬಳಿ ಕಂಡೆ
ಕಾವೇರಿದ ಮಾತೆಯನ್ನು
ಕೈಯಲ್ಲಿ ಕೊಡ ಹಿಡಿದು ತನ್ನೆದೆಗೆ
ತಾನೇ ನೀರೆರೆದುಕೊಳ್ಳುವುದನ್ನು

ತನ್ನ ಹಾಗೂ ಪಕ್ಕದ ಮನೆ ಮಕ್ಕಳ
ಕಿತ್ತಾಟದಿಂದ
ಎದೆಯಲ್ಲುರಿದ ಕಿಚ್ಚಾರಿಸುವ ಪ್ರಯತ್ನವಿತ್ತೇ
ಅಥವಾ ಬಿರು ಬೇಸಿಗೆಗೆ ಬಳಲಿ ಸೊರಗಿ
ಮುನ್ನುಗ್ಗಿದ ಕಣ್ಣೀರು
ಎದೆಯಳತೆಯಲ್ಲೇ ಬೀಳುತ್ತಿತ್ತೇ

ನಿಬ್ಬೆರಗಾಗಿ ಬಿಟ್ಟ ಬಾಯಿ ಬಿಟ್ಟು, ಬಾಯಲ್ಲಿ ಬೆಟ್ಟಿಟ್ಟು
ಕಣ್ಣರಳಿಸಿ ನೋಡುತ್ತಿತ್ತೊಂದು ಮಗು ತಾಯ ಕಾಲ ಬಳಿ
ನಿರೀಕ್ಷಿಸುತ್ತಾ
ತಾಯಿ ತನಗೆ ನೀರೂಡಿಸಬಹುದೇ
ಇಲ್ಲಾ ಬೇರೆಯವರ ಪಾಲಾಗಬಹುದೇ

Nireekshe

kaavEri Bavanada baLi kaMDe
kaavErida maateyannu
kaiyalli koDa hiDidu tannedege
taanE nIreredukoLLuvudannu

tanna haagoo pakkada mane makkaLa
kittaaTadiMda
edeyallurida kiccaarisuva prayatnavittE
athavaa biru bEsigege baLali soragi
munnugida kaNNIru
edeyaLateyallE bILuttittE

nibberagaagi biTTa baayi biTTu, baayalli beTTiTTu
kaNNaraLisi nODuttittoMdu magu taaya kaala baLi
nirIkShisuttaa
taayi tanage nIrooDisabahudE illaa
bEreyavara paalaagabahudE