Wednesday, October 18, 2023

ಬದುಕು ಸುಂದರವಾಗಿದೆ - II


ಕನಸಲ್ಲಿ ಕನವರಿಸಿ ಮನದಲದನಳವಡಿಸಿ

ಭ್ರಮೆಯಲ್ಲಿ ಬದುಕಿದರೆ ಬದುಕೇನು?

ಕಂಡ ಕನಸ ನನಸಾಗಿಸಲು ಮುನ್ನಡೆಯದೇ

ನಿಂದಲ್ಲೇ ನಿಂದರೆ ಪ್ರಯೋಜನವೇನು?


ಕಷ್ಟಗಳ ಕಟುವಾಗಿ ಬೈದೆದುರಿಸಬೇಕು

ಕಲ್ಲು ಮುಳ್ಳುಗಳ ಸರಿಸಿ ಬದಿಗೊತ್ತಬೇಕು

ಸಾಧನೆಯ ಹಾದಿಯಲಿ ಹೋರಾಡಬೇಕು

ಧೃತಿಗೆಡದೆ ಕೃತಿಗಿಳಿದು ತಲೆಯೆತ್ತಬೇಕು

Monday, November 24, 2014

ಹೃದಯ ಬಡಿದಾಗ



ಎರಡು ಹೃದಯಗಳು ಒಂದೇ ಗತಿಯಲ್ಲಿ ಬಡಿಯುತ್ತಿದ್ದರೆ,
ಭಾವನೆ ಮಾತಿಲ್ಲದೇ ಮಧುರವಾಗಿ ಮನ ತಟ್ಟುವುದು,
ಚೌಕಟ್ಟಿನೊಳಗಿನ ಚಿತ್ರಗಳು ಚಲಿಸಿ ಹೊರ ಬರಲು ತುಡಿಯುವುದು,
ಸುರಿವ ಜಡಿಮಳೆಯೂ ಸಹನೀಯವಾಗಿ ಸುಂದರವೆನಿಸುವುದು.

ಸಮಯ ಸಹಭಾಗಿಯಾಗಿ ಸರಿತಪ್ಪೆಂಬ ಜಿಜ್ಞಾಸೆ ಮೂಲೆ ಸೇರುವುದು,
ಯಾರ ಹಂಗೂ ಇರದ ಮನಸು ಮೈ ಬಿರಿದು ಅರಳುವುದು,
ಕ್ಷಣದಲ್ಲಿ ಹೊಸತನ ತುಂಬಿ ಬೆಸುಗೆಯ ಹಾದಿ ನೋಡುವುದು,
ನೆಮ್ಮದಿಯ ನಿದ್ರೆಯಲಿ ನವಿರಾದ ಸ್ವಪ್ನಗಳ ಬೇಡುವುದು.

ಮನದ ಮೂಲೆಯ ನಾಚಿಕೆ ತೊಡೆದು ಕುಣಿಯುವುದು,
ಇಹದ ಪರಿವಿರದೆ ಭಯದ ಅರಿವಿರದೆ ವಿಹರಿಸುವುದು,
ಸನಿಹದಲಿ ಸಮನಾಗಿ ಸರಿದಂತೆ ಭ್ರಮಿಸುವುದು,
ಭ್ರಮೆಯನ್ನೆ ನಿಜವೆಂದು ಸಂಭ್ರಮಿಸಿ ಸುಖಿಸುವುದು.
Image: Google.co.in

Friday, October 24, 2014

ಮಕ್ಕಳು











ಮಕ್ಕಳು - ಮಲ್ಲಿಗೆ

ಮಕ್ಕಳೇ ಹಾಗೆ, ನೆನೆದರೆ ಮನದಲ್ಲಿ ಮಲ್ಲಿಗೆ ಹರಡುತ್ತಾರೆ
ಪರಿಮಳವು ನಮ್ಮೊಳಗೆ ಪಸರಿಸುವಂತೆ ಮಾಡುತ್ತಾರೆ
ತಮ್ಮ ಅರಿವಿಗೂ ಮೀರಿ ಮಧುರವಾಗಿರುತ್ತಾರೆ
ಊಹೆಗೂ ಮೀರಿದ ಅರಿವುಳ್ಳವರಾಗಿರುತ್ತಾರೆ

ಬಾಯಾರಿದವರಿಗೆ ಪ್ರೀತಿ ಹಂಚುವ ಝರಿಯಾಗಿರುತ್ತಾರೆ
ದಣಿದವರಿಗೆ ದಯೆ ತೋರುವ ದೈವವಾಗಿರುತ್ತಾರೆ
ಮಣಿದವರಿಗೆ ಮಮತೆ ನೀಡುವ ಕೊಡವಾಗಿರುತ್ತಾರೆ
ಕಲಿತಿರದ ಪಾಠಗಳ ಕಲಿಸುವ ಗುರುವಾಗಿರುತ್ತಾರೆ

ಆಟಪಾಟಗಳ ವಿಸ್ಮಯದಲ್ಲಿ ಮುಳುಗೇಳುತ್ತಿರುತ್ತಾರೆ,
ಮಾತು, ಮೌನಗಳ ಬಂಗಾರವಾಗಿರುತ್ತಾರೆ
ಮುಗ್ಧತೆಯಿಂದಲೇ ಕಲ್ಮಶ ತೊಳೆವ ಕೊಳವಾಗಿರುತ್ತಾರೆ
ಭಯವಿಲ್ಲದೇ ವ್ಯವಹರಿಸುವ ದನಿಯಾಗಿರುತ್ತಾರೆ

ಕೆಲವೊಮ್ಮೆ ಜವಾಬ್ದಾರಿಗೆ ಹೆಗಲಾಗುತ್ತಾರೆ
ಕತ್ತಲಲ್ಲಿ ನರಳುವವರಿಗೆ ಹಗಲಾಗುತ್ತಾರೆ
ಬಗಲಲ್ಲೇ ಇದ್ದು ಸಮಾಧಾನ ಹೇಳುತ್ತಾರೆ
ತಮ್ಮ ಮೇಲೆ ದೌರ್ಜನ್ಯ ನಡೆದರೂ ಮರೆತು ಬಿಡುತ್ತಾರೆ

ಮಕ್ಕಳೇ ಹಾಗೆ, ನೆನೆದರೆ ಮನದಲ್ಲಿ ಮಲ್ಲಿಗೆ ಹರಡುತ್ತಾರೆ
ಪರಿಮಳವು ನಮ್ಮೊಳಗೆ ಪಸರಿಸುವಂತೆ ಮಾಡುತ್ತಾರೆ

Thursday, October 23, 2014

ಬಲೆ



ಚಿತ್ರ : ಪಾರ್ಥ್ ಕಪೂರ್


ಚಿಂತೆಯಿಲ್ಲದ ಚಿಟ್ಟೆಯೊಂದು ಅತ್ತಿತ್ತ ಸುತ್ತುತ್ತ, 
ಅದನಿದನು ನೋಡುತ್ತ ಹಾರುತ್ತಲಿತ್ತು
ಗಮನಿಸಿದ ಜೇಡವೊಂದು ಸದ್ದಿಲ್ಲದೇ 
ಬಲೆ ನೇಯ್ದು ಬಳಿಯಲ್ಲೇ ಕಾಯುತ್ತಲಿತ್ತು

ಬಳುಕುತ್ತ ಬಂದ ಚಿಟ್ಟೆ ಬಲೆಯೆಂದು 
ಅರಿವಾಗುವ ಮೊದಲೇ ಸಿಕ್ಕಿಬಿತ್ತು
ಅಂಟಿನ ಬಲೆಯ ಗಂಟಿನಿಂದ 
ಬಿಡಿಸಿಕೊಳ್ಳಲು ಒದ್ದಾಡುತ್ತಲಿತ್ತು

ಗೆಲುವಿಗಡ್ಡವಾಗಿ ಜೇಡ ಮಹಾಶಯನ 
ಕಣ್ಗಾವಲು ಬಲವಾಗೇ ಇತ್ತು
ಬಲೆಯ ಸಿಕ್ಕಿನಲ್ಲಿ ಸಿಕ್ಕು ಬಿಡಿಸಿಕೊಳ್ಳಲಾರದ ಚಿಟ್ಟೆ ಬಸವಳಿಯತೊಡಗಿತ್ತು

ಸಮಯ ಕಾದು ಬಳಿ ಬಂದ ಜೇಡ 
ಚಿಟ್ಟೆಯನ್ನು ಇಂಚಿಂಚಾಗಿ ಕಬಳಿಸಿ
ಸಂಚಿನ ಬಲೆ ನೇಯ್ದು 
ಇನ್ನೊಂದು ಚಿಟ್ಟೆಯನ್ನು ಕಾಯುತ್ತಲಿತ್ತು

Wednesday, October 22, 2014

ಬೆಳಕು



ಬೆಳಕಿನ ಹಬ್ಬದ ಬೆಳಗಿನೊಂದಿಗೆ ಭರವಸೆಯ ಬೆಳಗಿರಲಿ,
ಬದುಕಲ್ಲಿ ಸದಾ ಬೆಳದಿಂಗಳಂಥ ಬೆಳಕು ತುಂಬಿರಲಿ.

ಭಾವನೆಗಳ ಬೆನ್ನಲ್ಲೇ ಬದುಕುವ ಛಲವಿರಲಿ,
ಬಾಳುದ್ದಕ್ಕೂ ಬರಿದಾಗದ ಮಾನವೀಯತೆಯ ಬಂಗಾರವಿರಲಿ.

ಬವಣೆಗಳ ಭಾಂಡಾರ ಸಂಪೂರ್ಣ ಖಾಲಿಯಾಗಲಿ,
ಅಲ್ಲಿ ಸಂತೋಷ ಸಮೃದ್ಧಿಯ ಸಂಭ್ರಮ ತುಂಬಿರಲಿ.

Sunday, October 05, 2014

ಭ್ರಮೆ



ಎಷ್ಟೊಂದು ಸಲ ನಮಗರಿವಿಲ್ಲದೇ ಏನೇನೋ
ಭಾವನೆಗಳನ್ನು ಬೆಳೆಸಿಕೊಂಡಿರುತ್ತೇವೆ, ಅಥವಾ
ಅರಿಯದೆಯೇ ಭ್ರಮೆಯ ಹಳ್ಳಕ್ಕೆ ಬೀಳುತ್ತೇವೆ
ಅಪಾತ್ರವಾಗಬಹುದೆಂಬ ಅರಿವಿಲ್ಲದೇ
ಯಾವ್ಯಾವುದೋ ಸ್ಥಾನಗಳನ್ನು ನೀಡಿರುತ್ತೇವೆ

ಮಳೆ ಹನಿದು ನೆರೆ ಬಂದು ಗುಡುಗು ಸಿಡಿಲು ಹೊಡೆದರೂ
ನಮ್ಮ ಗ್ರಹಿಕೆ ತಪ್ಪೆಂದು ಒಪ್ಪಲಾಗುವುದಿಲ್ಲ,
ಮನಸಿನ ಮಾತುಗಳನ್ನು ಕೇಳುವುದೇ ಇಲ್ಲ
ಕತ್ತಲು ಹರಿದು ಬೆಳಕಿನೊಂದಿಗೆ ಸತ್ಯ ಕಣ್ಣಿಗೆ ರಾಚಿದರೂ
ಭ್ರಮೆಯ ಬಿಗಿ ಹಿಡಿತದಿಂದ ಹೊರಬರಲು ಸಾಧ್ಯವಾಗುವುದಿಲ್ಲ

ಭ್ರಮೆಯನ್ನು ಭ್ರಮೆಯೆಂದು ಒಪ್ಪಲು ತಯಾರಿರುವುದಿಲ್ಲ,
ಬೆಳೆಸಿಕೊಂಡ ಭಾವನೆಗಳಿಂದ ಕಳಚಿಕೊಳ್ಳಲು ಆಗುವುದಿಲ್ಲ
ಭ್ರಮೆಯ ಆಟೋಟಕ್ಕೆ ಹೊಂದಿಕೊಳ್ಳಲಾಗುವುದಿಲ್ಲ
ಭ್ರಮೆಯ ಭ್ರಮೆ ಬಿಡದೆ ನೆಮ್ಮದಿಯೆಂದಿಗೂ ಇಲ್ಲ
ಹಾಗಾಗಿ, ಭ್ರಮೆಯಲ್ಲೇ ಬದುಕುವುದೂ ಜೀವನವಲ್ಲ

Thursday, October 02, 2014

ಕಾನನದ ಕಾನೂನು

ಚಿಗರೆ - ಚಿರತೆ
Photo: Google.co.in

ಬಿಳಿಯದೆಲ್ಲ ಹಾಲಲ್ಲವೆನ್ನುವರಿವಿಲ್ಲದ, 
ಲೋಕವನರಿಯದ, ಚಿಗರೆ
ಚಂಗನೆ ನೆಗೆದು ಕುಪ್ಪಳಿಸಿತು, 
ಹಸಿರು ಕಂಡು ಕುಣಿಯಿತು

ಕದಲಿಕೆ ಕಂಡು ಕುತೂಹಲಿಸಿತು, 
ಎಲ್ಲರೂ ತನ್ನವರೆಂದು ಭ್ರಮಿಸಿತು
ಹೊಂಚು ಹಾಕುತ್ತಿದ್ದ ಚಿರತೆ ಚಕ್ಕನೆ ನೆಗೆಯಿತು, 
ಚಿಗರೆಯ ಕತ್ತನ್ನು ಹಿಡಿಯಿತು

ಚಿಗರೆ ಕೀರಲುಗುಟ್ಟಿತು, 
ಕಣ್ಣೀರು ಸುರಿಯಿತು, ರಕ್ತ ಹರಿಯಿತು
ಚಿರತೆಯ ಪಟ್ಟು ಬಲವಾಯಿತು, 
ಚಿಗರೆ ಪ್ರಾಣವ ಬಿಟ್ಟಿತು

ಚಿರತೆಯು ಬಲಿ ಬೇಡುವ ಜೀವಿ, 
ಚಿಗರೆ ಬಲಿ ಬೀಳುವ ಜೀವಿ
ಇಲ್ಲಿ ಚಿರತೆಯ ತಪ್ಪಿಲ್ಲ, ಚಿಗರೆಗೆ ಬದುಕಿಲ್ಲ,
ಕಾನನದ ಕಾನೂನು ಮೀರಲು ಸಾಧ್ಯವಿಲ್ಲ !


Wednesday, August 13, 2014

ಮೊಗ್ಗು, ಮುಳ್ಳು, ಗುಲಾಬಿಯ ಹಸಿರು ಮಗ್



ಯಾರೋ ಕೊಟ್ಟ ಒಂದು ಕಾಫಿ ಮಗ್, ಬಿಳಿಯ ಬಣ್ಣದ್ದು, ಸುಂದರವಾಗಿತ್ತು, ಇಷ್ಟವಾಯಿತು. ನೋಡುತ್ತಿದ್ದರೆ ಸಂತೋಷವೆನಿಸುತ್ತಿತ್ತು. ಆದರೆ ಮಗ್ ಇರುವುದು ಹಾಗೇ ಇಡುವುದಕ್ಕಲ್ಲವಲ್ಲ, ಒಂದು ದಿನ ಬಿಸಿ ಬಿಸಿ ಕಾಫಿ ಹಾಕಿದೆ, ಫಟ್ ಎಂದು ಬಿರುಕು ಬಿಟ್ಟಿತು. ಆಘಾತವೆನಿಸಿದರೂ ತಡೆದುಕೊಂಡು ತೊಳೆದಿಟ್ಟೆ. ಮತ್ತೆ ಉಪಯೋಗಿಸ ಹೊರಟಾಗೆಲ್ಲಾ ಬಿರುಕು ಹೆಚ್ಚಾಗುತ್ತಿತ್ತು, ಹಾಗೇ ಇಟ್ಟೆ, ಕೊನೆಗೊಂದು ದಿನ ಒಡೆದು ಹೋಯಿತು.

ಮತ್ತೊಂದು ಹಳದಿ ಮಗ್ ಕಾಣಿಸಿತು. ಇದೂ ಉಪಯೋಗಕ್ಕೆ ತಕ್ಕದಾದಂತಿತ್ತು. ಮೊದಲ ಮಗ್‌ನಂತೆ ದುರ್ಬಲವಿರಬಹುದೇ ಎಂಬ ಸಂಶಯ ಬಂದಾಗ ಜೊತೆಗಿರುವವರು ಕೊಟ್ಟ ಭರವಸೆ ಮೇಲೆ ಕೊಂಡು ತಂದೆ. ಕೆಲವು ದಿನ ಬಳಸುವ ಧೈರ್ಯವಿಲ್ಲದೇ ಇಟ್ಟೆ, ಕೊನೆಗೆ ಬಳಸಲು ಯೋಗ್ಯವಾದುದೆಂಬ ನಂಬಿಕೆ ಬಂದ ಮೇಲೆ ಬಿಸಿ ಬಿಸಿ ನೀರು ಹಾಕಿದೆ. ಫಟ್ ಎಂದರೂ ಬಿರುಕು ಬಂದಿರಲಿಲ್ಲ, ಕುಡಿದೆ, ತೊಳೆದಿಟ್ಟೆ. ನಂತರ ದಿನಾ ನೆಮ್ಮದಿಯಿಂದ ಅದರಲ್ಲೇ ಕಾಫಿ ಕುಡಿಯುತ್ತಿದ್ದೆ. ಕೆಲವೇ ದಿನಗಳಲ್ಲಿ ಬಿಸಿ ಕಾಫಿ ಮೈಮೇಲೆ ಬಿದ್ದಾಗ ತಿಳಿಯಿತು ಮಗ್ ತಳದಲ್ಲೇ ಬಿರುಕು ಬಿಟ್ಟಿದೆಯೆಂದು. ಆದರೂ ಮಗ್‌ನ ಉಪಯೋಗಕ್ಕೆ ಮರುಳಾಗಿ ಅಂಟು ಹಾಕಿ ಸರಿಮಾಡಿದೆ. ಆದರೆ ಒಳಗೇ ಅಧೈರ್ಯವಿತ್ತು, ಇದು ಬಳಕೆಗೆ ಯೋಗ್ಯವಲ್ಲ, ಯಾವಾಗ ಬೇಕಾದರೂ ಒಡೆದು ಹೋಗಬಹುದೆಂದು. ಹಾಗಾಗಿ, ಅದನ್ನು ಶೋಕೇಸ್‌ನಲ್ಲಿಟ್ಟೆ. ಮುಂದೊಂದು ದಿನ, ಯಾರದೋ ಕೈ ತಾಗಿ ಬಿದ್ದು ಒಡೆದೇ ಹೋಯಿತು.

ಇತ್ತೀಚೆಗೆ ಒಂದು ಮೊಗ್ಗು, ಮುಳ್ಳು, ಗುಲಾಬಿಯಿರುವ ಹಸಿರು ಮಗ್ ನೋಡಿದೆ, ಅದರ ಗಾಂಭೀರ‍್ಯಕ್ಕೆ, ಸೌಂದರ್ಯಕ್ಕೆ ಮನಸೋತೆ. ಆದರೆ ಕೊಳ್ಳುವ ಧೈರ್ಯ ಬರಲಿಲ್ಲ. ಕೈಯಲ್ಲೇ ಹಿಡಿದು ಗುಣಗಾನ ಮಾಡುತ್ತಾ, ಹಳೆಯ ಅನುಭವಗಳಿಂದ ಹೆದರಿ ಮತ್ತೆ ಕೆಳಗಿಡುತ್ತಾ, ಆಸೆಯಿಂದ ಕೈಗೆತ್ತಿಕೊಳ್ಳುತ್ತಾ, ಜೊತೆಗಿರುವವರೊಂದಿಗೆ ಸಮಾಲೋಚಿಸಿದೆ. ತಟ್ಟಿ, ಕುಟ್ಟಿ, ಶಬ್ದ ತುಲನೆ ಮಾಡಿ, ಇದು ಮೊದಲವುಗಳಂತಲ್ಲ ಎಂಬ ಅಭಿಪ್ರಾಯ, ಭರವಸೆ ಪಡೆದು, ಮತ್ತೆ ಮತ್ತೆ ಚಿಂತಿಸಿ, ಕೊನೆಗೆ ಕೊಂಡೇಬಿಟ್ಟೆ. ಮನೆಗೆ ಬಂದ ತಕ್ಷಣ ಸ್ವಚ್ಛವಾಗಿ ತೊಳೆದು ಜ್ಯೂಸ್ ಹಾಕಿ ಕುಡಿದೆ, ಉಪಯುಕ್ತವೆನಿಸಿತು. ಆದರೆ ಮಗ್ ಇರುವುದು ಅದಕ್ಕಲ್ಲವಲ್ಲ, ಮರುದಿನ ಬಿಸಿ ಬಿಸಿ ಟೀ ಹಾಕಿದೆ, ಶಿವ ಶಿವಾ! ಮೊದಲೆರಡು ಮಗ್‌ಗಳಿಗಿಂತಲೂ ಭೀಕರವಾಗಿ ಫಟ್ ಎಂದಿತು. ಟೀ ಪೂರ್ತಿ ಸೋರಿ ಹೋಯಿತು. ಈಗ ಅದಕ್ಕೆಂದೇ ಶೋಕೆಸ್‌ನಲ್ಲಿ ಜಾಗ ಹುಡುಕುತ್ತಿದ್ದೇನೆ, ಆದರೆ ಒಡೆದು ಹೋದ ಮಗ್ ಇನ್ನೆಷ್ಟು ದಿನ ಇರಬಹುದು? ಇರುವಷ್ಟು ದಿನ ಇರಲಿ ಒಡಲಿಗೆ ಬೆಂಕಿಯಾದರೂ ಕಡೇ ಪಕ್ಷ ಕಣ್ಣಿಗೆ ತಂಪಾಗಿರುತ್ತದೆ.

ಇನ್ನು ಮುಂದೆ ಮಗ್ ತರುವ ಬಯಕೆಯೂ ಇಲ್ಲ, ಅಗತ್ಯವೂ ಇಲ್ಲ. ಏಕೆಂದರೆ ಕಣ್ಣಿಗೆ ಸುಂದರವಾಗಿದ್ದರೂ, ಉಪಯುಕ್ತವೆನಿಸಿದರೂ, ಅದರ ಅಗತ್ಯವಿದ್ದಾಗ ಫಟ್ ಎನ್ನುವುದಾದರೆ, ಇದ್ದು ಪ್ರಯೋಜನವೇನು? ಅದಕ್ಕೇ, ಸ್ಟೀಲ್ ಲೋಟವೇ ಲೇಸಜ್ಞ ಎಂಬ ನಿಲುವು ತಳೆದಿದ್ದೇನೆ.

Saturday, February 18, 2012

Kodachadriya Karulu

Intestine of Kodachadri - Kodachadriya Karulu




HOW SAD !!

Tuesday, January 26, 2010

ಆಶಾಭಾವ
























ಚಿತ್ರ: ಗೂಗಲ್, ಸೆಲ್ಫ್


ಬದುಕಿನುದ್ದಕ್ಕೂ ಅದೇನನ್ನೋ ಹುಡುಕುತ್ತಿದ್ದೆ. ಏನೆಂಬುದು ತಿಳಿದಿರಲಿಲ್ಲ. ಏನೋ ಚಡಪಡಿಕೆ, ಸಂಕಟ, ತಿಳಿಯಲಾರದ ಅಸಮಾಧಾನ, ನೋವು. ಎಲ್ಲಾ ಇದ್ದರೂ, ಏನೂ ಇಲ್ಲವೆಂಬ ಶೂನ್ಯ ಭಾವ.

ಗೊಂದಲದಿಂದ ಸಾಗುತ್ತಿದ್ದಾಗ ಒಂದಿರುಳು ತಂಪು ಗಾಳಿ ಸುಳಿಯಿತು. ಸುತ್ತಮುತ್ತ ಮಧುರವಾದ ಪರಿಮಳ ಹರಡಿತು. ಕಣ್ಣ್ ಕುಕ್ಕದ, ಹಿತವಾದ ಬೆಳಕು ! ಆ ಕ್ಷಣದಿಂದ ಎಂಥಾ ನೆಮ್ಮದಿ ! ಜೀವನದುದ್ದಕ್ಕೂ ನಡೆಸುತ್ತಿದ್ದ ಹುಡುಕಾಟ ಗುರಿಮುಟ್ಟಿದ ಭಾವ. ತಳಮಳ ಅಸಹನೆ, ಸಿಟ್ಟು, ಶೂನ್ಯ ಭಾವ ಇನ್ನಿಲ್ಲವೆಂಬಂಥಾ ಶಾಂತಿ !!

ಸುತ್ತಮುತ್ತ, ಅಕ್ಕಪಕ್ಕ ತಿರುಗಿದೆ, ತಲೆ ಎತ್ತಿ ನೋಡಿದೆ, ಅದೋ ಅಲ್ಲಿ ! ಬಾನಂಗಳದಲ್ಲೊಂದು ಮುದ್ದಾದ ನಕ್ಷತ್ರ ಮಿನುಗುತ್ತಿತ್ತು. ವಜ್ರದಂತೆ ಹೊಳೆಯುತ್ತಿತ್ತು. ನನ್ನತ್ತ ನೋಡಿ ನಗುತ್ತಿತ್ತು. ಅದರ ಕಂಗಳಲ್ಲಿ ಸೂಸುತ್ತಿದ್ದ ಹೊಳಪು, ಪ್ರೀತಿಗೆ ಮೈಮರೆತೆ, ಜಗ ಮರೆತೆ. ಕನಸಲ್ಲೆಂಬಂತೆ ಅದರತ್ತ ನಡೆಯಲು ಹೊರಟೆ, ಅದು ನನ್ನ ಬಾಚಿ ತಬ್ಬಿಕೊಂಡ ಭಾವ. ಇನ್ನೇನೂ ಭಯವಿಲ್ಲವೆಂಬ ಸಾಂತ್ವನ. ಅಪೂರ್ವ, ಅಖಂಡ ಭರವಸೆ.

ಕಾಡುತ್ತಿದ್ದ ಗೊಂದಲ ಬಿಟ್ಟು ಹೋಯ್ತು, ಬಾಯಾರಿದ ಪ್ರೀತಿಯ ಕೊಡ ತುಂಬಿತು. ಧೈರ್ಯದಿಂದ ಮುನ್ನುಗ್ಗುವ ಉತ್ಸಾಹ ಮೊಳೆಯಿತು.

ಹೀಗೆ ಇಹ ಮರೆತ, ನೆಮ್ಮದಿಯ ಬದುಕು ಸಾಗುವಾಗ ಒಂದು ದಿನ ಕಾರ್ಮೋಡ ಕವಿಯಿತು, ಬಾನು ಗುಡುಗಿತು. ಭಯಗೊಂಡು ನಕ್ಷತ್ರದ ಅಭಯವರಸಿ ಹುಡುಕಿದೆ, ಆದರೆ ತಡವಾಗಿತ್ತು. ಮತ್ತೆ ಅನಾಥ ಪ್ರಜ್ಞೆ ! ಕಳಕೊಂಡ ನೋವು, ಸಂಕಟ ! ಸದ್ದಿಲ್ಲದೇ ದಟ್ಟವಾಗಿ ಪಸರಿಸಿದ ನಕ್ಷತ್ರದೆಡೆಗಿನ ಪ್ರೀತಿ ಸುಮ್ಮನಿರಲು ಬಿಡದೆ ನಾಯಿಪಾಡು ಮಾಡಿತು. ಹುಡುಕಾಟದ ದಿನಗಳು ಮತ್ತೆ ಪ್ರಾರಂಭವಾಗುವ ಸೂಚನೆ !

ಅಷ್ಟರಲ್ಲಿ, ಅರೆಕ್ಷಣ ಸರಿದ ಕಾರ್ಮೋಡದ ಮರೆಯಿಂದ ನಕ್ಷತ್ರ ಅದೇ ಹೊಳಪು, ಪ್ರೀತಿ ಕಣ್ಗಳಿಂದ ನೋಡಿ ಅರೆನಗು ನಗುತ್ತಾ ಹೇಳಿತು "ಜಗವನ್ನೇ ಪಡೆದೆ ಎಂದು ಬೀಗಬೇಡ, ಇಲ್ಲಿ ಯಾವುದೂ ಶಾಶ್ವತವಲ್ಲ, ನಿನ್ನಂತಯೇ ಪರರು, ನಿನ್ನಂತೆ ಗೊಂದಲಕ್ಕೀಡಾಗಿರುವವರ ಕಡೆಗೆ ನನ್ನ ಒಲವು, ಪಯಣ, ಇಷ್ಟುದಿನ ಪಡೆದುದಷ್ಟೇ ನಿನ್ನದು, ಅತಿಯಾಸೆ ಬೇಡ. ನೀಡಬೇಕಾದುದರ ಮಿತಿ ದಾಟಿರುವುದರಿಂದ ನಾನೀಗ ಹೋಗಲೇ ಬೇಕಿದೆ"

ಭಯದಿಂದ ಚೀರಲಾರಂಭಿಸಿದೆ. ಕೈ ಚಾಚಿ ಓಡಿದೆ, ಅಸಾಧ್ಯವೆಂಬರಿವಿದ್ದರೂ ಆಕಾಶದೆತ್ತರಕ್ಕೆ ನೆಗೆಯುವ ಯತ್ನ ಮಾಡಿದೆ. ದಿಕ್ಕೆಟ್ಟು ಅಂಗಲಾಚಿದೆ, ಹುಚ್ಚಿಯಂತೆ ಪ್ರಲಾಪಿಸಿದೆ. ನಕ್ಷತ್ರ ಮರುಕದಿಂದ ನೋಡುತ್ತಿತ್ತು. ಆ ಮರುಕವೂ ನನಗೆ ಪ್ರಿಯವಾಗೇ ಕಂಡಿತು, ಅದಾದರೂ ಸಿಗಲಿ ಎಂಬಾಸೆ. ನನ್ನ ಹುಚ್ಚಾಟ ನೋಡಿ ಬೇಸತ್ತು, ಮಸುಕಾಗುತ್ತಿರುವ ನಕ್ಷತ್ರ ಹೇಳಿತು "ಹುಚ್ಚೀ, ವಾಸ್ತವವನ್ನು ಒಪ್ಪಿಕೋ, ನಿನ್ನ ನೀನು ನಂಬಿಸಿಕೊಂಡು ಬದುಕುವ ಯತ್ನ ಬೇಡ "

ಹೇಗೆ ! ಹೇಗೆ ಸಾಧ್ಯ ಇದು ! ಎಂಬ ಸಂಕಟ. ಎದ್ದೆದ್ದು ಹೊಡೆಯುವ ಸತ್ಯ, ಕಹಿಯಾದ ಸತ್ಯ. ಕಣ್ಣೆದುರೇ ಇದ್ದರೂ, ದೂರ ಇರುವ, ದೂರವಾಗುತ್ತಿರುವ ಅರಿವು. ಕೊನೆಗೂ ಅದು ನಕ್ಷತ್ರವಾಗೇ ಉಳಿಯಿತು, ಕೈಗೆಟುಕಲಿಲ್ಲ. ಮತ್ತೆ ಅನಾಥವಾಗಿಸಿತು.

ಎದೆಯಲ್ಲಿ ಬತ್ತದ ಆಶಾಭಾವ. ಮತ್ತೆ ಆಗಸ ಶುಭ್ರವಾಗಬಹುದು, ನಕ್ಷತ್ರ ಇನ್ನೊಮ್ಮೆ ಆಗಸದಲ್ಲಿ ಹೊಳೆಯಬಹುದು, ಪ್ರೀತಿ ತುಂಬಿದ ಕಂಗಳಿಂದ ಹರಸಬಹುದು, ಎದೆಗವುಚಿಕೊಂಡು ಸಾಂತ್ವನ ಹೇಳಬಹುದು...