Friday, March 15, 2024

ಎಚ್ಚರಿಕೆ

 

ಕೆಟ್ಟದೆಂಬುದರ ಕಟ್ಟಿಡದಿದ್ದರೆ

ಅದು ಒಳ್ಳೆಯದರ ಕತ್ತು ಹಿಸುಕಬಹುದು

ಕೆಟ್ಟದೆಂಬುದು ಒಳ್ಳೆಯದನ್ನು ಮೆಟ್ಟಿ ನಿಂದರೆ

ಒಳ್ಳೆಯದರ ಉಸಿರು ನಿಲ್ಲಬಹುದು


ಅಸತ್ಯವನ್ನು ಅರಳಲು ಬಿಟ್ಟರೆ

ಸತ್ಯವು ಅಲ್ಲಿಯೇ ಮುದುಡಬಹುದು

ಅಸತ್ಯವು ಸತ್ಯವನ್ನು ಕುಗ್ಗಿಸಿದರದು

ಸವಾಲಾಗಿ ಪರಿಣಮಿಸ ಬಹುದು


ಅಸುರರಿಗೆ ಅವಕಾಶ ಕೊಟ್ಟರೆ 

ಅಳತೆ ಮೀರಿ ಅಂಧಕಾರ ಮುಸುಕಬಹುದು

ಅಸುರರ ಅಟ್ಟಹಾಸ ತಾರಕಕ್ಕೇರಿದರೆ

ದೇವತೆಗಳ ಸ್ವರ ಕೇಳದಾಗಬಹುದು


ನಮ್ಮ ನಾವು ತಿದ್ದಿಕೊಳ್ಳದಿದ್ದರೆ

ಬೇರೆಯವರು ದೂರವಾಗ ಬಹುದು

ಬೇರೆಯವರ ಸ್ನೇಹವಿಲ್ಲದಿದ್ದರೆ

ಬದುಕು ಬರಡು ಎನಿಸ ಬಹುದು


ಅರ್ಥವಾಗಿ ಎಚ್ಚೆತ್ತುಕೊಳ್ಳದಿದ್ದರೆ

ಸಮಯ ಜಾರಿ ಹೋಗಬಹುದು

ಇರುವ ಸಮಯವ ಬಳಸದಿದ್ದರೆ 

ಬದುಕಿದ್ದೂ ವ್ಯರ್ಥವೆನಿಸಬಹುದು 

No comments: