Wednesday, January 31, 2024

ನೀರ ಮೇಲಿನ ಗುಳ್ಳೆ

 

ಅಲ್ಲಿ ಚುಕ್ಕೆಯಿದೆ ಎಂದರೂ ಜಗಳ

ನೀರ ಗುಳ್ಳೆ ನಿಜವಲ್ಲವೆಂದರೂ ಜಗಳ

ಪ್ರತಿಯೊಬ್ಬರ ಅನುಭವ ಬೇರೆಬೇರೆ

ಎಂಬ ವ್ಯತ್ಯಾವಿಲ್ಲದೇ, ಕಚ್ಚಾಟ, ಕಳವಳ


ಮುಖವಾಡ ತೊಟ್ಟರೆ ಮುಖವನ್ನು 

ಮರೆಮಾಚಬಹುದು ಮನಸನ್ನಲ್ಲ

ಮನಸ್ಸಿಲ್ಲದೇ ಒಪ್ಪಿದರದು ನೈಜವಲ್ಲ

ನಿಜವಲ್ಲದ ವ್ಯವಹಾರದ ಅಗತ್ಯವಿಲ್ಲ


ಎದುರಿನವರು ಕನ್ನಡಿಯಲ್ಲ, ಬಿಂಬ ನಮ್ಮದಲ್ಲ 

ಈ ಸತ್ಯ ಮರೆತು, ತಿಳಿಸುವ ಯತ್ನ ಸರಿಯಲ್ಲ

ಸ್ವತಃ ಅರಿವಾದರೆ ಎಲ್ಲವೂ ಅರ್ಥವಾಗುತ್ತದೆ

ಒತ್ತಾಯದ ಬೂದಿ ಮುಚ್ಚಿಟ್ಟರೆ ಕೆಂಡ ಕುದಿಯುತ್ತದೆ 


ತಾಳ್ಮೆ ತಪ್ಪಿದಾಗ ಬೂದಿ ಹಾರಿ ಹೋಗುತ್ತದೆ

ಮುಚ್ಚಿಟ್ಟ ಕೆಂಡ ಮೇಲೆದ್ದು ಉರಿ ಉಗುಳುತ್ತದೆ

ಎಲ್ಲರನ್ನೂ ಎಲ್ಲವನ್ನೂ ಸಮಾನವಾಗಿ ಸುಡುತ್ತದೆ

ಒಳಗೂ ಹೊರಗೂ ಅಸಾಧ್ಯ ನೋವು ತುಂಬುತ್ತದೆ


ಪೊಳ್ಳು ಅಹಂಭಾವ ಬಿಟ್ಟು ನಮ್ಮನ್ನು 

ನಾವೇ ತಕ್ಕಡಿಯಲ್ಲಿ ತೂಗಿಕೊಂಡರೆ

ಇನ್ನೊಬ್ಬರ ಭಾವನೆ ಅರಿವಿಗೆ ಬರುತ್ತದೆ

ದಹನದ ಬದಲು ಸುಖ ಸಹನೆಯಿರುತ್ತದೆ


ಸ್ವಲ್ಪ ಎಚ್ಚರದಿಂದಿದ್ದು ಭಾವನೆಗೆ

ಅಂಕುಶವಿಟ್ಟಿದ್ದಿದ್ದರೆ ಎಂಬ ಪರಿತಾಪ

ಯಾಕಾಗಿ ಈ ಕೋಪ, ಅಸಹ್ಯ ರೂಪ,

ಆಮೇಲೆ ಸುಮ್ಮನೇ ಪಶ್ಚಾತ್ತಾಪ


No comments: