ಕನಸುಗಳ ಕಟ್ಟಿಡಬಾರದು
ಬಿಸಿಲಿಗೆ ಬಿಡಿಸಿಡಬೇಕು
ಬೆಳಕಿಗೆ ತೆರೆದಿಡಬೇಕು
ಮನಸಲಿ ಹರಡಿಡಬೇಕು
ಕನವರಿಸುತ್ತಾ ಕಾಯಬಾರದು
ಎದ್ದು ನಡೆಯಬೇಕು
ಬಿದ್ದರೆ ಮೇಲೇಳಬೇಕು
ಧೈರ್ಯದಿಂದ ಮುನ್ನುಗ್ಗಬೇಕು
ಮನದಲ್ಲೇ ಮಂಡಿಗೆ ತಿನ್ನಬಾರದು
ಮನಸ್ಸಿಟ್ಟು ಕಲಿಯಬೇಕು
ಕಲಿತಿರುವುದನ್ನು ಗಳಿಸಬೇಕು
ಗಳಿಸಿರುವುದನ್ನು ಉಳಿಸಬೇಕು
ಕನಸುಗಳ ಕಟ್ಟಿಡಬಾರದು
ಬಿಸಿಲಿಗೆ ಬಿಡಿಸಿಡಬೇಕು
ಬೆಳಕಿಗೆ ತೆರೆದಿಡಬೇಕು
ಮನಸಲಿ ಹರಡಿಡಬೇಕು
ಕನವರಿಸುತ್ತಾ ಕಾಯಬಾರದು
ಎದ್ದು ನಡೆಯಬೇಕು
ಬಿದ್ದರೆ ಮೇಲೇಳಬೇಕು
ಧೈರ್ಯದಿಂದ ಮುನ್ನುಗ್ಗಬೇಕು
ಮನದಲ್ಲೇ ಮಂಡಿಗೆ ತಿನ್ನಬಾರದು
ಮನಸ್ಸಿಟ್ಟು ಕಲಿಯಬೇಕು
ಕಲಿತಿರುವುದನ್ನು ಗಳಿಸಬೇಕು
ಗಳಿಸಿರುವುದನ್ನು ಉಳಿಸಬೇಕು
ರಾಶಿ ಚಕ್ರಗಳ ಬದಲಾವಣೆಯ ವಿಶೇಷ
ಮೀನದಿಂದ ಮೇಷಕ್ಕೆ ಸೂರ್ಯನ ಪ್ರವೇಶ
ಮನೆಮನೆಗಳಲ್ಲಿ ಕಣಿಯ ಸಮಾವೇಶ
ಜನಮನಗಳಲ್ಲಿ ಹೊಸವರ್ಷದ ಹರ್ಷೋಲ್ಲಾಸ
ವಿಷುವಿನ ಶುಭಾಶಯ.
-ಪೂ. ೧೪-೦೪-೨೦೨೫
ದಾರಿ ಖರ್ಚಿಗೆ ದ್ರಾಕ್ಷೆಯಿಟ್ಟು
ದಾಹವಾದಾಗ ತಿನ್ನ ಹೊರಟು
ಹುಳಿಯಾಯಿತೆಂದು ಗೊಣಗಿದೊಡೆಂತು
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ
ಜುಟ್ಟಿಗೆ ಮಲ್ಲಿಗೆಯೇರಿಸಿ
ಕೈಖಾಲಿಯಾಯಿತೆಂದು ಪರಿತಪಿಸಿದರೆಂತು
ದುಡಿಯುವ ವಯಸ್ಸಿನಲ್ಲಿ
ಆಲಸಿಯಾಗಿ ಅಲೆದು
ವಯಸ್ಸಾದಾಗ ಭದ್ರತೆಗೆ ಹಪಹಪಿಸಿದರೆಂತು
ಇರುವ ಸಂಬಂಧಗಳ
ಉಳಿಸಿಕೊಳ್ಳದೆ ದೂರ ಮಾಡಿ
ಆಮೇಲೆ ಪಶ್ಚಾತ್ತಾಪ ಪಟ್ಟರೆಂತು
ವರ್ತಮಾನದಲ್ಲಿ ಗಮನಿಸದೆ
ಮದದಿಂದ ನಡೆದು
ಭವಿಷ್ಯದಲ್ಲಿ ಕಂಗಾಲಾದೊಡೆಂತು
ಸಂತೋಷದಲ್ಲಿ ಶಿವನ ನೆನೆಯದೆ
ದುಗುಡದಲ್ಲಿ ದೆಸೆಗೆಟ್ಟು
ದಯನೀಯವಾಗಿ ಬೇಡಿಕೊಂಡರೆಂತು
ಹೊಸ ವರ್ಷದ ಹೊಳಪಿನಲಿ
ಹಳೆ ಮಂಕು ಕಳೆಯಲಿ
ಹೊಸ ಬದುಕ
ಬೆಳಕಿನಲಿ
ಹಸಿರ ಹೊನಲು
ಹರಿಯಲಿ
ಯುಗಾದಿಯ ಶುಭಾಶಯಗಳು
ಮುದುಡಿದ ಹೃದಯದೊಳಗೆ ಹುದುಗಿದ
ನೋವಿನ ಹಂದರದಿ ಅಡಗಿದ ಬೀಜ ಬಿರಿದು
ಮೊಳೆಯಿತೆಲ್ಲೆಡೆ ಚಿಗುರು
ಉಳಿಯಿತೆಲ್ಲೆಡೆ ಉಸಿರು
ಕಮರಿದ ಮನದಲ್ಲಿ ಮುಚ್ಚಿಟ್ಟ ಬೂದಿ
ಕದಡಿ ಹೊರ ಚಿಮ್ಮಿದ ಕಮಟು ಸರಿದು
ಅರಳಿತೆಲ್ಲೆಡೆ ಸುಗಂಧ ಪುಷ್ಪ
ಹರಡಿತೆಲ್ಲೆಡೆ ಸುವಾಸನೆ
ಕಟ್ಟುಪಾಡುಗಳ ಕಠಿಣ ಕ್ರಮಗಳ ನಡುವೆ
ಬಿಟ್ಟು ಬಿಡಲಾರದ ಭಾವನೆಗಳು ಮೆರೆದು
ಧರ್ಮ ಒತ್ತಾಗಿ ಉಳಿದವು
ಮರ್ಮ ಒಟ್ಟಾಗಿ ಕಳಿತವು
ಆಕಾಶದಲ್ಲಿ ಹರಡಿದ ಕರಿ ಮೋಡ
ಗಾಳಿಯೊಂದಿಗೆ ಜೋಲಾಡಿ ನೆಗೆದು
ಚೆಲ್ಲಿತೆಲ್ಲೆಡೆ ನವ್ಯ ನಕ್ಷತ್ರ
ಪ್ರಕಾಶಿಸಿತೆಲ್ಲೆಡೆ ಭವ್ಯ ಬೆಳಕು
ಕಳೆದುಕೊಂಡ ಅಕ್ಕರೆಯ
ಅಕ್ಷರಗಳಲಿ ಕಂಡುಕೊಂಡು
ಹೊಸ ಪ್ರೀತಿ ಬೆಸುಗೆಗೊಂಡ
ಅವಿಸ್ಮರಣೀಯ ಘಟನೆಯದು
ಬರೆದುದನ್ನು ತಿದ್ದಿ ತೀಡಿ
ಮತ್ತೆ ಮತ್ತೆ ಓದಿ ನೋಡಿ
ಭಾವನೆಗಳ ತೋಡಿ ತೋಡಿ
ಪುಟವನ್ನು ತುಂಬಿಸಿದ ದಿನವದು
ಜ್ಞಾನವನ್ನು ಮಾನವಾಗಿಸಿ
ಮಾನವನ್ನು ಒತ್ತೆಯಿಟ್ಟು
ಮನದಲ್ಲಿ ಸ್ಫುರಿಸಿದುದನ್ನು
ಮಂದಿಗೆ ತಲುಪಿಸಿದ ಕ್ಷಣವದು
ಒಳ್ಳೆಯದೋ ಕೆಟ್ಟದ್ದೋ
ಉಳ್ಳದ್ದೋ ಉಳಿದುದೋ
ಬಂದಂತೇ ಒಪ್ಪಿ ಸ್ವೀಕರಿಸಿದರೆ
ಅದೇ ಸುಖ ಜೀವನವಹುದು
ಅಡಿಗಡಿಗೆ ಎದುರಾದ ಅಡ್ಡಿ ಆತಂಕ ಅದುಮಿಟ್ಟು
ಆರ ಬಾಯಿಗೂ ಸಿಕ್ಕದಂತೆ ನೀ ಜಾರಿ ಹೋದೆಯಾ
ಅಕ್ಕಿ ಚೆಲ್ಲಿದಂತೆ ಬೆಳ್ಳಕ್ಕಿ ಸಾಲನೆಬ್ಬಿಸಿ ಹಾರಿಸಿ
ಬೆರಗಿನ ಬೆಳಕು ತಂದು ನೀ ದೂರ ಹೋದೆಯಾ
ಅಕ್ಕರೆಯ ಅಪರಂಜಿ ಸಕ್ಕರೆಯ ಸವಿ ಸವಿದು
ನಕ್ಕರೆ ಮುತ್ತು ಸುರಿಸಿ ನೀ ಕರಗಿ ಹೋದೆಯಾ
ಬೆಟ್ಟ ಬೆಟ್ಟಗಳ ಹತ್ತಿ ಘಟ್ಟದ ಮಣ್ಣನ್ನು ಮೆಟ್ಟಿ
ಬೊಟ್ಟಿಟ್ಟುಕೊಂಡು ನೀ ಮೈಮರೆತು ಹೋದೆಯಾ
ಮೊಗ್ಗು ಬಿರಿದು ಹೂವಾಗಿ ಹೂ ಮುದುಡಿ ಮಿಡಿಯಾಗಿ
ಕಾಯಿ ಹಣ್ಣಾಗುವವರೆಗೆ ನೀ ಕಾಯದೇ ಹೋದೆಯಾ
ಕ್ರೋಧಕ್ಕೆ ಅಂಕುಶವಿಟ್ಟು ಕೋದಂಡವನ್ನು ಹಿಡಿದು
ಪ್ರೀತಿಯನ್ನು ಪಾವನವಾಗಿಸದೆ ನೀ ಎದ್ದು ಹೋದೆಯಾ
ಪದಗಳಲ್ಲಿ ಪದಗಳನ್ನು ಅರ್ಥದಲ್ಲಿ ಅರ್ಥ ಹುಡುಕುತ್ತಾ
ವ್ಯರ್ಥ ಸಮಯ ಸ್ವಾರ್ಥಕ್ಕೆ ನೀ ಬಲಿಯಾಗಿ ಹೋದೆಯಾ
ಬೆಳ್ಳಿ ಬೆಳಕಾಗಿ ಮಳ್ಳು ಮರೆಯಾಗಿ ಜೊಳ್ಳು ಕೊಡವಿ
ಪೊಳ್ಳ ತಿರಸ್ಕರಿಸಿದಂತೆ ನೀ ಒದ್ದು ಹೋದೆಯಾ
ಹಾದಿಗೆ ಹಾಸಿದ ಹುಲ್ಲಿನಂತೆ ಗಾಳಿಗೆ ತೇಲಿದ ಗರಿಯಂತೆ
ಮಂಜು ಮುಸುಕು ಬಾನಲ್ಲಿ ನೀ ಹಾರಿ ಹೋದೆಯಾ
ಕರೆದರೆ ಬರಲಾರದೆ ಬಂದರೆ ನಿಲಲಾರದೆ ಕೂಗುಗಳಿಗೆ
ಕಿವಿಗೊಡದೆ ನಿಶ್ಯಬ್ದ ನಿರ್ವಾಣಕ್ಕೆ ನೀ ಮೊರೆ ಹೋದೆಯಾ
ಅಗಲಿದವರಿಗೆ ಅರಿವಿಲ್ಲ ಇರುವವರಿಗೆ ನೆಮ್ಮದಿಯಿಲ್ಲ
ಇದ್ದಷ್ಟು ದಿನ ನೆನಪಿನಲ್ಲಿ ನೀ ಕಳೆದು ಹೋದೆಯಾ
ಎಲ್ಲೋ ಏನೋ ಆದಾಗ ಎಲ್ಲೆಯಿಲ್ಲದೇ ನೆರವು ನೀಡಿ
ಎಲ್ಲರ ಹೃದಯದಲ್ಲಿ ನೀ ಉಳಿದು ಹೋದೆಯಾ
ನಿರ್ದಿಷ್ಟ ಹಾದಿಯಲ್ಲಿ ನಿಶ್ಚಿತ ಸಮಯದಲ್ಲಿ
ಅದ್ಭುತ ರೀತಿಯಲ್ಲಿ ನೀ ಸಾಗಿ ಹೋದೆಯಾ
ಅರಳಿದ ಸುಮಗಳಲ್ಲಿ ಅಡರಿದ ಪರಿಮಳದಲ್ಲಿ
ಸದ್ಗತಿಯರಸುತ್ತ ಅನಂತದಲ್ಲಿ ನೀ ಲೀನವಾದೆಯಾ
ಎಳ್ಳು-ಬೆಲ್ಲ ಎಲ್ಲೆಡೆಯಲ್ಲಿ
ಒಳ್ಳೆಯ ಮಾತು ಬಾಯಿಯಲ್ಲಿ
ಸುಖ ಶಾಂತಿ ಜೀವನದಲ್ಲಿ.
ಸಂಕ್ರಾಂತಿಯ ಶುಭಾಶಯ.
- ಫೂ.
14-01-2025